ನವದೆಹಲಿ: ಕೊರೊನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿನ್ಯಾಯಾಲಯದ ಆವರಣಕ್ಕೆ ಆಗಮಿಸುವ ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ದೆಹಲಿ ಹೈಕೋರ್ಟ್ಗೆ ವಕೀಲರೊಬ್ಬರು ಮನವಿ ಸಲ್ಲಿಸಿ, ಮುಂಜಾಗ್ರತಾ ಕ್ರಮವಾಗಿ ಕೆಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಆಡಳಿತ ವರ್ಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಈ ಅರ್ಜಿಯು ಮಾರ್ಚ್ 16ರಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಾಟೀಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಒಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.
ವಕೀಲರಾದ ರಶ್ಮಿ ಬನ್ಸಾಲ್ ಎಂಬುವರುಮನವಿ ಸಲ್ಲಿಸಿದ್ದು, ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆ ಇರುವುದರಿಂದ ನ್ಯಾಯಾಲಯದಲ್ಲಿ ಯಾವುದೇ ಕೆಲಸ ಇಲ್ಲದಿದ್ದರೂ ಆಗಮಿಸುವ ವ್ಯಕ್ತಿಗಳ ಪ್ರವೇಶವನ್ನುನಿರ್ಬಂಧಿಸಬೇಕೆಂದು ಕೋರಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯೇ ಕೊರೊನಾ ವೈರಸ್ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲೂ ಕಟ್ಟು ನಿಟ್ಟಿನ ಕ್ರಮಗಳನ್ನು ಸಂಬಂಧಪಟ್ಟವರು ಕೈಗೊಳ್ಳಬೇಕು.
ಒಂದು ವೇಳೆ ನ್ಯಾಯಾಲಯಕ್ಕೆ ಆಗಮಿಸಲೇಬೇಕೆನ್ನುವವರು ಅಗತ್ಯ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ನಂತರ ಬರಬೇಕು. ಇದಕ್ಕೆ ನ್ಯಾಯಾಲಯದ ಆಡಳಿತ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.ನ್ಯಾಯಾಲಯ ಎಂದರೆ ಸಾವಿರಾರು ಮಂದಿ ತಮ್ಮ ಪ್ರಕರಣಗಳ ಸಂಬಂಧ ಹಾಜರಾಗಲು ಆಗಮಿಸುತ್ತಿರುತ್ತಾರೆ. ಅವರ ಜೊತೆ ಸಂಬಂಧಿಕರು, ಸ್ನೇಹಿತರು ಕೂಡ ಆಗಮಿಸುತ್ತಾರೆ. ಅಷ್ಟೇ ಪ್ರಮಾಣದಲ್ಲಿ ಕೆಲಸ ಇಲ್ಲದೆ ಇರುವವರೂ ನ್ಯಾಯಾಲಯಕ್ಕೆ ಆಗಮಿಸುತ್ತಾರೆ.ಇವರಲ್ಲಿ ಸೋಂಕು ಪೀಡಿತರೂ ಬರಬಹುದು. ಅದಕ್ಕಾಗಿಯೇ ಅಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಮತ್ತೊಬ್ಬರಿಗೆ ಹರಡದಂತೆ ತಡೆಗಟ್ಟಬೇಕೆಂದು ರಶ್ಮಿ ಬನ್ಸಾಲ್ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.