ADVERTISEMENT

ಲಾಕ್‌ಡೌನ್‌ ಪರಿಣಾಮ: ದೆಹಲಿಯಿಂದ 200 ಕಿ.ಮೀ ನಡೆದು ಮೃತಪಟ್ಟ ಯುವಕ

ಏಜೆನ್ಸೀಸ್
Published 29 ಮಾರ್ಚ್ 2020, 3:13 IST
Last Updated 29 ಮಾರ್ಚ್ 2020, 3:13 IST
   

ನವದೆಹಲಿ:ರಾಷ್ಟ್ರ ರಾಜಧಾನಿಯಿಂದ 200 ಕಿ.ಮೀ ನಡೆದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹಳ್ಳಿಯಲ್ಲಿರುವ ತಮ್ಮ ಮನೆಗೆ ತಲುಪಬೇಕಿದ್ದ ಯುವಕ ಮಾರ್ಗ ಮಧ್ಯದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾವುದೇ ವಾಹನ ಸಿಗದೇ ಕಾಲ್ನಡಿಗೆಯ ಮೂಲಕ ಮನೆ ತಲುಪಲು ಈ ಯುವಕ ತಮ್ಮ ಪ್ರಯಾಣ ಆರಂಭಿಸಿದ್ದು, ದೆಹಲಿ-ಆಗ್ರಾ ಹೆದ್ದಾರಿಯಲ್ಲಿ ಸಾವನ್ನಪ್ಪಿದ್ದಾರೆ.

ಮೃತಪಟ್ಟಿರುವ 38 ವರ್ಷದ ರಣವೀರ್‌ ಸಿಂಗ್‌ ಅವರು ದೆಹಲಿಯಲ್ಲಿರುವ ಆಹಾರ ಸರಬರಾಜು ಮಾಡುತ್ತಿದ್ದ ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದರು ಎಂದು ತಿಳಿದುಬಂದಿದೆ.

ADVERTISEMENT

ರಣವೀರ್‌ ಸಿಂಗ್ ಅವರ ಕುಟುಂಬ ವಾಸವಿದ್ದ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹಳ್ಳಿಯು ಅವರು ಸಾವನ್ನಪ್ಪಿರುವ ಸ್ಥಳದಿಂದ ಇನ್ನೂ 100 ಕಿ.ಮೀ ದೂರದಲ್ಲಿತ್ತು ಎಂದು ತಿಳಿದುಬಂದಿದೆ.

ರಣವೀರ್ ಸಿಂಗ್ ದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದ್ದು, ಪೂರ್ಣಗೊಂಡ ನಂತರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಣವೀರ್ ಸಿಂಗ್ ಜೊತೆಯಲ್ಲಿದ್ದ ಇಬ್ಬರು, 'ಸಾವನ್ನಪ್ಪುವ ಸ್ವಲ್ಪ ಸಮಯಕ್ಕೂ ಮೊದಲು ರಣವೀರ್‌ ಸಿಂಗ್‌ಗೆ ಎದೆ ನೋವು ಕಾಣಿಸಿಕೊಂಡಿತ್ತು' ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.