ADVERTISEMENT

ಕೊರೊನಾ ವಿರುದ್ಧ ಹೋರಾಟ: ವಿದೇಶಿ ದೇಣಿಗೆ ಸ್ವೀಕರಿಸಲು ನಿರ್ಧರಿಸಿದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 2:19 IST
Last Updated 2 ಏಪ್ರಿಲ್ 2020, 2:19 IST
   

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 'ಪಿಎಂ ಕೇರ್ಸ್‌' ನಿಧಿಗೆ ವಿದೇಶದಿಂದ ಬರುವ ದೇಣಿಗೆಯನ್ನು ಸ್ವೀಕರಿಸಲು ಕೇಂದ್ರಸರ್ಕಾರ ನಿರ್ಧರಿಸಿದೆ.

ಆ ಮೂಲಕ ಕೊರೊನಾ ಸೋಂಕು ಸೃಷ್ಟಿಸಿರುವ ಬಿಕ್ಕಟ್ಟನ್ನು ಎದುರಿಸಲು ವಿದೇಶಿ ದೇಣಿಗೆ ಸ್ವೀಕರಿಸುವುದಿಲ್ಲ ಎಂಬ ನಿರ್ಧಾರದಿಂದ ಮೋದಿ ನೇತೃತ್ವದ ಸರ್ಕಾರ ಹಿಂದೆ ಸರಿದಿದೆ.

ಯಾವುದೇ ರಾಷ್ಟ್ರೀಯತೆ ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯು 'ಪಿಎಂ ಕೇರ್ಸ್‌' ನಿಧಿಗೆ ದೇಣಿಗೆ ನೀಡಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ADVERTISEMENT

ಸಾಂಕ್ರಾಮಿಕ ಪಿಡುಗು ಎದುರಿಸಲು ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ (ಪಿಎಂ ಕೇರ್ಸ್) ವಿದೇಶದಿಂದ ಬರುವ ದೇಣಿಗೆಯನ್ನು ಸ್ವೀಕರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಅವರು 'ಪಿಎಂ ಕೇರ್ಸ್' ನಿಧಿಯನ್ನು ಸ್ಥಾಪಿಸಿರುವುದಾಗಿ ಶನಿವಾರ ಘೋಷಿಸಿದರು. ಪ್ರಧಾನಿ ಮೋದಿ ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದು, ಅದರ ಸದಸ್ಯರ ಪಟ್ಟಿಯಲ್ಲಿ ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.