ADVERTISEMENT

ಕೇವಲ ಚಪ್ಪಾಳೆ, ತಟ್ಟೆ, ದೀಪಗಳ ಮೂಲಕ ಯುದ್ದ ಗೆಲ್ಲಲು ಸಾಧ್ಯವಿಲ್ಲ: ಶಿವಸೇನಾ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 10:53 IST
Last Updated 7 ಏಪ್ರಿಲ್ 2020, 10:53 IST
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ   

ಮುಂಬೈ: ಚಪ್ಪಾಳೆ ಹೊಡೆಯುವುದು, ತಟ್ಟೆ ಬಾರಿಸುವುದು ಮತ್ತು ದೀಪಗಳನ್ನು ಬೆಳಗಿಸುವುದರ ಮೂಲಕ ಕೊರೊನಾ ವೈರಸ್‌ ವಿರುದ್ಧದ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಮಂಗಳವಾರ ಶಿವಸೇನಾ ಹೇಳಿದೆ.

ಈ ಬಗ್ಗೆ ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಲಾಗಿದ್ದು, 'ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಜನರು ತಪ್ಪಾಗಿ ಗ್ರಹಿಸಿದ್ದಾರೆ. ಮೋದಿಯವರು ಜನರಿಂದ ಏನು ಬಯಸಿದ್ದರು ಎಂಬುದನ್ನು ಸ್ಪಷ್ಟವಾಗಿ ಹೇಳಬೇಕಿತ್ತು. ಆದೇಶಗಳನ್ನು ಪಾಲಿಸದವರಿಗೆ ಶಿಕ್ಷೆಯಾಗಬೇಕು' ಎಂದು ಹೇಳಿದೆ.

ಭಾನುವಾರ ರಾತ್ರಿ 9 ಗಂಟೆಗೆ ಒಂಬತ್ತು ನಿಮಿಷಗಳ ಕಾಲ ತಮ್ಮ ಮನೆಗಳಲ್ಲಿ ವಿದ್ಯುತ್‌ ಲೈಟ್‌ಗಳನ್ನು ಆರಿಸಿ ದೀಪ ಬೆಳಗಿಸುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಬೇಕೆಂದು ಪ್ರಧಾನಿ ಮೋದಿ ಕಳೆದ ವಾರ ಜನರಿಗೆ ಮನವಿ ಮಾಡಿದ್ದರು.

ADVERTISEMENT

ಪ್ರಧಾನಿ ಕರೆಗೆ ಓಗೊಟ್ಟಿದ್ದ ಜನರು ತಮ್ಮ ಮನೆಗಳಲ್ಲಿ ಮೇಣದಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಿದ್ದರು.

ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಶಿವಸೇನಾ, 'ಕೇವಲ ತಟ್ಟೆ, ಚಪ್ಪಾಳೆ ಮತ್ತು ದೀಪಗಳಿಂದ ಕೊರೊನಾ ವಿರುದ್ಧದ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರಧಾನಿಯವರ ಕರೆಯನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿರಬಹುದು, ಅಥವಾ, ಇಂತಹ ಹಬ್ಬದ ವಾತಾವರಣ ಪ್ರಧಾನಿಯವರಿಗೆ ಬೇಕಾಗಿರಬಹುದು' ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.