ADVERTISEMENT

ಕೊರೊನಾ ತಲ್ಲಣ: ಭಾರತದಲ್ಲಿ ಒಂದೇ ದಿನ 600ಕ್ಕೂ ಹೆಚ್ಚು ಪ್ರಕರಣ ದೃಢ

ಪಿಟಿಐ
Published 4 ಏಪ್ರಿಲ್ 2020, 16:21 IST
Last Updated 4 ಏಪ್ರಿಲ್ 2020, 16:21 IST
   

ನವದೆಹಲಿ: ದೇಶದಲ್ಲಿ ಶನಿವಾರ 600ಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಸೋಂಕು (ಕೋವಿಡ್–19) ಪ್ರಕರಣಗಳು ದೃಢಪಟ್ಟಿವೆ. ಇದು ದೇಶದಲ್ಲಿ ಈವರೆಗೆ, ಒಂದೇ ದಿನ ಪತ್ತೆಯಾದ ಗರಿಷ್ಠ ಸಂಖ್ಯೆಯ ಪ್ರಕರಣಗಳಾಗಿವೆ. ಮೃತಪಟ್ಟವರ ಸಂಖ್ಯೆ ನೂರನ್ನು ಸಮೀಪಿಸಿದೆ.

ಕೋವಿಡ್‌ ಬಾಧಿತರ ಪೈಕಿ ಕೇರಳ, ದೆಹಲಿ ಮತ್ತು ಮಧ್ಯಪ್ರದೇಶದ 58 ಮಂದಿಯ ಸ್ಥಿತಿ ಗಂಭೀರವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 2,092, ಸಾವಿನ ಸಂಖ್ಯೆ 68 ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ವಿವಿಧ ರಾಜ್ಯಗಳು ನೀಡಿದ ಅಂಕಿ ಅಂಶ ಆಧರಿಸಿ ಪಿಟಿಐ ಸುದ್ದಿಸಂಸ್ಥೆ ನೀಡಿದ ಮಾಹಿತಿ ಪ್ರಕಾರ, ಒಟ್ಟು ಪ್ರಕರಣಗಳು 3,450ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 96ಕ್ಕೆ ಏರಿಕೆಯಾಗಿದೆ. 277 ಮಂದಿ ಗುಣಮುಖರಾಗಿದ್ದಾರೆ.

ಸೋಂಕಿನ 1,023 ಪ್ರಕರಣಗಳು ದೆಹಲಿಯ ನಿಜಾಮುದ್ದೀನ್‌ನಲ್ಲಿ ಕಳೆದ ತಿಂಗಳು ನಡೆದ ತಬ್ಲೀಗ್‌ ಜಮಾತ್‌ ಸಭೆಯ ಜತೆ ನಂಟು ಹೊಂದಿವೆ. ಈ ಸಭೆಯಲ್ಲಿ ಭಾಗವಹಿಸಿದವರು, ಅವರ ಸಂಪರ್ಕಕ್ಕೆ ಬಂದವರು ಸೇರಿ 22 ಸಾವಿರ ಜನರನ್ನು ದೇಶದ ವಿವಿಧ ಭಾಗಗಳಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿ ಸೋಂಕಿಗೆ ಒಳಗಾದವರನ್ನು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಉತ್ತರ ಪ್ರದೇಶ ಸೇರಿ 17 ರಾಜ್ಯಗಳಲ್ಲಿ ಪತ್ತೆ ಮಾಡಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಶೇ 30ರಷ್ಟು ಒಂದೇ ಸ್ಥಳದಿಂದ ಪಸರಿಸಿದೆ. ಇದನ್ನು ಆರಂಭದಲ್ಲಿಯೇ ಗ್ರಹಿಸಿ ನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್‌ ಹೇಳಿದ್ದಾರೆ.

ಪರೀಕ್ಷೆಗೆ ಒಳಗಾದ 25 ಸೋಂಕು ಶಂಕಿತರ ಪೈಕಿ ಒಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಲಾಕ್‌ಡೌನ್‌ನ ಕಟ್ಟುನಿಟ್ಟಿನ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಮತ್ತು ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಮಾತ್ರವೇ ಕೋವಿಡ್‌ ಪಿಡುಗನ್ನು ಸೋಲಿಸಲು ಸಾಧ್ಯ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.