ಡಾ. ಅತಲೂರಿ ನಮೃತಾ
ಹೈದರಾಬಾದ್: ಬಾಡಿಗೆ ತಾಯ್ತನದ ಹೆಸರಿನಲ್ಲಿ ಮಕ್ಕಳ ಕಳ್ಳಸಾಗಣೆ ಹಾಗೂ ಅನೈತಿಕ ಐವಿಎಫ್ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಹೈದರಾಬಾದ್ನ ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ನ ಮುಖ್ಯಸ್ಥೆ ಡಾ. ಅತಲೂರಿ ನಮೃತಾ ಹಾಗೂ ಇತರ ಐವರನ್ನು ಬಂಧಿಸಲಾಗಿದೆ.
ಭಾನುವಾರ ಹೈದರಾಬಾದ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಡಿಸಿಪಿ ರಶ್ಮಿ ಪೆರುಮಾಳ್ ಅವರು ಈ ವಿಷಯ ತಿಳಿಸಿದ್ದಾರೆ.
ಸಿಕಂದರಾಬಾದ್ನಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ದಂಪತಿಯೊಬ್ಬರು ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ನಿಂದ ನಮಗೆ ಮೋಸ ಆಗಿದೆ ಎಂದು ಗೋಪಾಲಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪತ್ನಿಗೆ ಗರ್ಭಧಾರಣೆ ಸಮಸ್ಯೆ ಇದ್ದಿದ್ದಕ್ಕೆ 2024 ರಲ್ಲಿ ಬಾಡಿಗೆ ತಾಯ್ತನದ ಮೊರೆ ಹೋಗಲಾಗಿತ್ತು. ಇದಕ್ಕಾಗಿ ಆಸ್ಪತ್ರೆಯವರು ಹಂತ ಹಂತವಾಗಿ ₹35 ಲಕ್ಷ ಕಟ್ಟಿಸಿಕೊಂಡಿದ್ದರು. ನಮಗೆ ಮಗು ಕೊಟ್ಟಾಗ ಮಗುವಿನ ಅನುವಂಶೀಕ ಲಕ್ಷಣಗಳ ಮೇಲೆ ಅನುಮಾನ ಬಂದು ಡಿಎನ್ಎ ಪರೀಕ್ಷೆಯನ್ನು ದೆಹಲಿಯಲ್ಲಿ ಮಾಡಿಸಿದ್ದೆವು. ಆ ಪರೀಕ್ಷೆಯಲ್ಲಿ ಬಾಡಿಗೆ ತಾಯ್ತನದ ಮೂಲಕ ನಮಗೆ ಸಿಕ್ಕಿರುವ ಮಗು ನಮ್ಮದಲ್ಲ ಎಂದು ತಿಳಿದು ಬಂದಿತ್ತು. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಕಳೆದ ಒಂದು ವಾರದಿಂದ ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ನ ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣದ ಶಾಖೆಗಳಲ್ಲಿ ತೀವ್ರ ತಪಾಸಣೆ ನಡೆಸಿ ದಾಖಲೆಗಳನ್ನು ಜಾಲಾಡಿದ್ದರು ಎಂದು ಎನ್ಡಿಟಿವಿ ಸುದ್ದಿ ವೆಬ್ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.