ADVERTISEMENT

ಕೋವಿಡ್‌: ಆರೋಪಿಗಳಿಗೆ ಹೊರಗಡೆಗಿಂತ ಜೈಲೇ ಸುರಕ್ಷಿತ ಎಂದ ನ್ಯಾಯಾಲಯ

ಪಿಟಿಐ
Published 14 ಜುಲೈ 2021, 9:54 IST
Last Updated 14 ಜುಲೈ 2021, 9:54 IST
ಐಸ್ಟಾಕ್: ಪ್ರಾತಿನಿಧಿಕ ಚಿತ್ರ
ಐಸ್ಟಾಕ್: ಪ್ರಾತಿನಿಧಿಕ ಚಿತ್ರ   

ಮುಂಬೈ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಚಿಂತನ್‌ ಉಪಾಧ್ಯಾಯ, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಧ್ಯಂತರ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈನ ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿದೆ.

‘ಹೊರಗಿನ ವಾತಾವರಣಕ್ಕೆ ಹೋಲಿಸಿದರೆ, ಜೈಲಿನೊಳಗಿರುವ ವಾತಾವರಣ ಆರೋಪಿಗೆ ಸುರಕ್ಷಿತವಾಗಿದೆ’ ಎಂಬುದನ್ನು ಗಮನಿಸಿದ ನ್ಯಾಯಾಲಯ, ಚಿಂತನ್ ಉಪಾಧ್ಯಾಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಡಿಸೆಂಬರ್ 11, 2015ರಲ್ಲಿ ಮುಂಬೈ ಮೂಲದ ಕಲಾವಿದೆ, ಪತ್ನಿ ಹೇಮಾ ಉಪಾಧ್ಯಾಯ ಮತ್ತು ಆಕೆಯ ಪರ ವಕೀಲ ಹರೇಶ್ ಭಂಭಾನಿ ಅವರನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಚಿಂತನ್ ಉಪಾಧ್ಯಾಯ ಜೈಲು ಶಿಕ್ಷಗೆ ಗುರಿಯಾಗಿದ್ದ. ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ನೀಡಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ.

ADVERTISEMENT

ಜಾಮೀನು ಅರ್ಜಿ ನಿರಾಕರಿಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಡಿ.ಡಿ. ಖೋಚೆ, ‘ಜೈಲು ಅಧಿಕಾರಿಗಳು ಆರೋಪಿಗಳನ್ನು ಸಾಧ್ಯವಾದಮಟ್ಟಿಗೆ ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ, ಜೈಲಿನಲ್ಲಿ ಸೋಂಕು ಅಷ್ಟೆಲ್ಲ ಪರಿಣಾಮಕಾರಿಯಾಗಿ ಹರಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ’ಕೊರೊನಾ ಎರಡನೇ ಅಲೆ ಈಗ ನಿಯಂತ್ರಣದಲ್ಲಿದೆ’ ಎಂದು ಹೇಳಿದರು.

‘ನಿತ್ಯ ಹೊರಗೆ ದುಡಿಯುವ ಜನರು ಸೋಂಕಿಗೆ ತೆರೆದುಕೊಳ್ಳುವ ಅಪಾಯವನ್ನು ಹೋಲಿಸಿದರೆ, ಜೈಲಿನೊಳಗಿರುವ ಆರೋಪಿಗಳು ಬಹಳ ಸುರಕ್ಷಿತವಾಗಿದ್ದಾರೆ ಎಂದು ಎನ್ನಿಸುತ್ತದೆ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.