ADVERTISEMENT

ದೆಹಲಿ: ಎ.10ರ ಬಳಿಕ ಇದೇ ಮೊದಲ ಬಾರಿಗೆ ನಾಲ್ಕಂಕಿಗೆ ಇಳಿದ ಸೋಂಕಿತರ ಸಂಖ್ಯೆ

ಸಕ್ರಿಯ ಪ್ರಕರಣಗಳು ಈಗ ಕೇವಲ 71,794

​ಪ್ರಜಾವಾಣಿ ವಾರ್ತೆ
Published 15 ಮೇ 2021, 4:53 IST
Last Updated 15 ಮೇ 2021, 4:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹೊಸದಾಗಿ ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆಯು 10,000ಕ್ಕಿಂತ ಕಡಿಮೆ ದಾಖಲಾಗಿದ್ದು, ಶುಕ್ರವಾರ 8,506 ಜನರಲ್ಲಿ ಸೋಂಕು ದೃಢಪಟ್ಟಿದೆ.

ಇದೇ ವೇಳೆ 14,140 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 71,794 ಇಳಿದಿರುವುದು ಆಶಾದಾಯಕ ಬೆಳವಣಿಗೆಗಾಗಿ ಹೊರಹೊಮ್ಮಿದೆ.

ಏಪ್ರಿಲ್‌ 10ರ ನಂತರ ಇದೇ ಮೊದಲ ಬಾರಿಗೆ ಸೋಂಕು ದೃಢಪಟ್ಟವರ ಸಂಖ್ಯೆಯು ನಾಲ್ಕಿಂಕಿಗೆ ಇಳಿದಿರುವುದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

ಶುಕ್ರವಾರ ಸಂಜೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಪರೀಕ್ಷೆಗೆ ಒಳಪಟ್ಟ 68,575 ಜನರ ಪೈಕಿ ಶೇ 12.40ರ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ.

ಇದೇ ಅವಧಿಯಲ್ಲಿ 289 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸೋಂಕು ಹರಡುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದ್ದರೂ, ಸಾವಿನ ಪ್ರಮಾಣ ನಿಯಂತ್ರಣಕ್ಕೆ ಬಾರದಿರುವುದು ಆತಂಕವನ್ನು ಹೆಚ್ಚಿಸಿದೆ.

ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ 40ರಿಂದ 50ರಷ್ಟು ಕಡಿಮೆ ಆಗುತ್ತಿದೆಯಾದರೂ, ಕಳೆದ 10 ದಿನಗಳ ಅವಧಿಯಲ್ಲಿ 3,539 ಜನ ಪ್ರಾಣ ಕಳೆದುಕೊಂಡಿದ್ದಾರೆ.

ತಗ್ಗಿದ ಆಮ್ಲಜನಕ ಬೇಡಿಕೆ:
ಏಪ್ರಿಲ್‌ 19ರಿಂದ ಜಾರಿಯಾಗಿರುವ ಲಾಕ್‌ಡೌನ್‌ ಪರಿಣಾಮ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಕಡಿವಾಣ ಬಿದ್ದಿದ್ದು, ಸೋಂಕಿನ ಸರಪಳಿ ಬೆಳೆಯದಿರುವುದಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಬೇಡಿಕೆ ತಗ್ಗಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರೆಯದೇ ತಲೆದೋರಿದ್ದ ಹಾಹಾಕಾರವೂ ಕಡಿಮೆಯಾಗಿದೆ.

ಕೊರೊನಾ ಪೀಡಿತರಿಗಾಗಿ ಕೇಂದ್ರ ಸರ್ಕಾರವು ದೆಹಲಿಗೆ ಹಂಚಿಕೆ ಮಾಡಿದ್ದ ಆಮ್ಲಜನಕವನ್ನು ಅಗತ್ಯ ರಾಜ್ಯಗಳಿಗೆ ಪೂರೈಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.