ADVERTISEMENT

ನಿರ್ಬಂಧ, ನಿಯಂತ್ರಣದ ಅಧಿಕಾರ ರಾಜ್ಯಗಳಿಗೆ: ಆರೋಗ್ಯ ಸಚಿವಾಲಯದ ಸೂಚನೆ

ಓಮೈಕ್ರಾನ್‌ ಆತಂಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:45 IST
Last Updated 23 ಡಿಸೆಂಬರ್ 2021, 19:45 IST
ಹೊಸ ವರ್ಷದ ಸಂಭ್ರಮಾಚರಣೆ (ಸಾಂದರ್ಭಿಕ ಚಿತ್ರ)
ಹೊಸ ವರ್ಷದ ಸಂಭ್ರಮಾಚರಣೆ (ಸಾಂದರ್ಭಿಕ ಚಿತ್ರ)   

ವದೆಹಲಿ: ಕೋವಿಡ್‌–19 ನಿಯಂತ್ರಣಕ್ಕಾಗಿ ಈ ಹಿಂದೆ ರೂಪಿಸಿದ್ದ ಕೇಂದ್ರಗಳನ್ನು ಪುನರಾರಂಭಿಸಿ, ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಿ ಮತ್ತು ಸ್ಥಳೀಯ ಸಾಂಕ್ರಾಮಿಕ ಪ್ರವೃತ್ತಿಗಳ ಬಗ್ಗೆ ಕಣ್ಣಿಟ್ಟಿರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿದೆ.

ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ನ 300ಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ದೃಢ‍ಪಟ್ಟ ಬಳಿಕ ಕೇಂದ್ರವು ಈ ಸೂಚನೆಗಳನ್ನು ಗುರುವಾರ ನೀಡಿದೆ.

ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 10 ದಾಟುವುದಕ್ಕೆ ಮುನ್ನ ಮತ್ತು ಆಮ್ಲಜನಕ ಲಭ್ಯ ಇರುವ ಹಾಸಿಗೆಗಳ ಭರ್ತಿ ಪ್ರಮಾಣವು ಶೇ 40ಕ್ಕೆ ತಲುಪುವ ಮುನ್ನ ನಿರ್ಬಂಧ ಮತ್ತು ನಿಷೇಧಗಳನ್ನು ಹೇರಲು ರಾಜ್ಯಗಳಿಗೆ ಅವಕಾಶ ಇದೆ. ಜನ ದಟ್ಟಣೆ ಮತ್ತು ಸ್ಥಳೀಯ ಪರಿಸ್ಥಿತಿಯ ಆಧಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಹುದು. ಯಾವುದೇ ನಿರ್ಬಂಧಗಳನ್ನು ಹೇರುವುದಾದರೆ, ಕನಿಷ್ಠ 14 ದಿನ ಅದು ಜಾರಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.

ADVERTISEMENT

‘ಕೋವಿಡ್‌–19 ನಿಯಂತ್ರಣಕ್ಕಾಗಿ ಈ ಹಿಂದೆ ಆರಂಭಿಸಿದ್ದ ಕೇಂದ್ರಗಳನ್ನು ಹಲವು ರಾಜ್ಯಗಳು ಸ್ಥಗಿತಗೊಳಿಸಿವೆ. ಈ ಎಲ್ಲ ಕೇಂದ್ರಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲು ಕ್ರಿಯಾಯೋಜನೆ ರೂಪಿಸಿ, ವೈದ್ಯರು, ಆಂಬುಲೆನ್ಸ್‌ ಇತ್ಯಾದಿ ಲಭ್ಯ ಇರುವಂತೆ ನೋಡಿಕೊಳ್ಳಿ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ಹತ್ತಿರ ಬಂದಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡುವುದನ್ನು ತಡೆಯಲು ರಾತ್ರಿ ಕರ್ಫ್ಯೂ ಹೇರಬಹುದು. ಹೆಚ್ಚು ಜನರು ಸೇರುವುದನ್ನು ತಡೆಯಬೇಕು. ಕಂಟೈನ್‌ಮೆಂಟ್‌ ಮತ್ತು ಬಫರ್‌ ವಲಯಗಳನ್ನು ರೂಪಿಸಬೇಕು. ಹೊಸ ಕ್ಲಸ್ಟರ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.