ನವದೆಹಲಿ: ಕೋವಿಡ್ -19 ಲಾಕ್ಡೌನ್ ಪರಿಣಾಮ ಕಳೆದ ಒಂದು ವರ್ಷದಿಂದ ಕೆಲಸ ಮತ್ತು ವೇತನ ಇಲ್ಲದೇ ಟೆಕ್ವಾಂಡೊ ತರಬೇತುದಾರರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ಈ ಘಟನೆ ದೆಹಲಿಯ ಮಂಗೋಲ್ಪುರಿಯಲ್ಲಿ ನಡೆದಿದ್ದು, ಮೃತನನ್ನು ತಾನೂಪ್ ಜೋಹರ್ (46) ಎಂದು ಗುರುತಿಸಲಾಗಿದೆ.
ರೋಹಿಣಿಯಲ್ಲಿನ ಖಾಸಗಿ ಶಾಲೆಯಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ ಜೋಹರ್ಗೆ ಶಾಲಾ ಆಡಳಿತ ಮಂಡಳಿ ಬಾಕಿ ವೇತನವನ್ನೂ ಪಾವತಿಸಿರಲಿಲ್ಲ. ಕಳೆದ ಒಂದು ವರ್ಷದಿಂದ ಆತ ನಿರುದ್ಯೋಗಿಯಾಗಿದ್ದ. ಇದರಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜೋಹರ್ ಕಳೆದ ವರ್ಷದ ಮಾರ್ಚ್ನಿಂದ ಆನ್ಲೈನ್ನಲ್ಲಿ ತರಬೇತಿ ನೀಡುತ್ತಿದ್ದರು. ಶಾಲಾ ಆಡಳಿತ ಮಂಡಳಿ ವೇತನ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದರಿಂದಾಗಿ ಆನ್ಲೈನ್ ತರಬೇತಿ ನೀಡುವುದನ್ನು ನಿಲ್ಲಿಸಿದ್ದರು. ಜತೆಗೆ ಕಾರ್ಮಿಕ ನ್ಯಾಯಾಲಯದಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ದಾವೆ ಕೂಡ ಹೂಡಿದ್ದರು.
ಮರಣ ಪೂರ್ವದ ಪತ್ರ ದೊರೆತಿದ್ದು, ಶಾಲಾ ಆಡಳಿತ ಮಂಡಳಿ ಬಾಕಿ ವೇತನ ಪಾವತಿಸದ ಕಾರಣ ಜೀವನ ತೊಂದರೆಗೆ ಸಿಲುಕಿತು ಎಂದು ಆಪಾದಿಸಿದ್ದು, ಶಾಲಾ ಆಡಳಿತ ಮಂಡಳಿಗೆ ಸೇರಿದ ಇಬ್ಬರು ವ್ಯಕ್ತಿಗಳ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಿರುದ್ಯೋಗಿಯಾಗಿದ್ದಕ್ಕೂ ಪತ್ರದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.