ADVERTISEMENT

ವಿಸ್ಟ್ರಾನ್‌ ಗಲಭೆ: ಯಡಿಯೂರಪ್ಪ ಧೋರಣೆಗೆ ಸಿಪಿಐ(ಎಂ) ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 13:58 IST
Last Updated 20 ಡಿಸೆಂಬರ್ 2020, 13:58 IST
ಬಿ. ಎಸ್‌ ಯಡಿಯೂರಪ್ಪ
ಬಿ. ಎಸ್‌ ಯಡಿಯೂರಪ್ಪ    

ನವದೆಹಲಿ: ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಾರ್ಮಿಕ ವಿರೋಧಿ ನಿಲುವು ಕೈಗೊಂಡಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ.

ಪಕ್ಷದ ಪಾಲಿಟ್‌ ಬ್ಯೂರೊ ಸಭೆಯಲ್ಲಿ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ ಮುಖಂಡರು, ಕಾರ್ಮಿಕರ ಬಂಧನ ಮತ್ತು ಪೊಲೀಸರ ದೌರ್ಜನ್ಯವನ್ನು ಖಂಡಿಸಿದರು.

ನಾಲ್ಕು ತಿಂಗಳು ಕಾಲ ಗುತ್ತಿಗೆ ಕಾರ್ಮಿಕರಿಗೆ ವೇತನ ನೀಡಿರಲಿಲ್ಲ ಮತ್ತು 12 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಹೀಗಾಗಿಯೇ ಕಾರ್ಮಿಕರು ರೊಚ್ಚಿಗೆದ್ದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ADVERTISEMENT

ವಿಸ್ಟ್ರಾನ್‌ನಲ್ಲಿನ ಸುಮಾರು ಹತ್ತು ಸಾವಿರ ಕಾರ್ಮಿಕರಲ್ಲಿ ಶೇಕಡ 80ರಷ್ಟು ಮಂದಿ ಗುತ್ತಿಗೆ ಕಾರ್ಮಿಕರಿದ್ದಾರೆ. ಇವರನ್ನು ಕಾಯಂ ಮಾಡಿಕೊಂಡಿರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ಈ ರೀತಿ ಕಾನೂನುಗಳನ್ನು ಉಲ್ಲಂಘಿಸುವುದು ಸಾಮಾನ್ಯವಾಗುತ್ತಿದೆ. ಆ್ಯಪಲ್‌ ಕಂಪನಿ ಸಹ ವಿಸ್ಟ್ರಾನ್‌ ಕಂಪನಿ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಕಾರ್ಮಿಕರ ಪರ ನಿಲುವು ತೆಗೆದುಕೊಳ್ಳದೆಯೇ ವಿಸ್ಟ್ರಾನ್‌ ಕಂಪನಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿಸಿದೆ.

ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ ಕಾರ್ಮಿಕರ ಹಕ್ಕುಗಳನ್ನು ಉಲ್ಲಂಘಿಸುವುದು ಮತ್ತಷ್ಟು ಸಹಜವಾಗುತ್ತದೆ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹ ಕಾರ್ಮಿಕ ವಿರೋಧಿ ನಿಲುವು ಕೈಗೊಳ್ಳಬಾರದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.