ADVERTISEMENT

ಶಾಂತಿಯುತ ಪ್ರತಿಭಟನೆಗೆ ಅಪರಾಧದ ಬಣ್ಣ: ಕೇಂದ್ರದ ವಿರುದ್ಧ ಸಿಪಿಐ (ಎಂ) ಟೀಕೆ

ಪಿಟಿಐ
Published 13 ಸೆಪ್ಟೆಂಬರ್ 2020, 11:26 IST
Last Updated 13 ಸೆಪ್ಟೆಂಬರ್ 2020, 11:26 IST
ಸೀತಾರಾಂ ಯೆಚೂರಿ
ಸೀತಾರಾಂ ಯೆಚೂರಿ   

ನವದೆಹಲಿ: ‘ಶಾಂತಿಯುತ ರಾಜಕೀಯ ಪ್ರತಿಭಟನೆಗಳಿಗೆ ಅಪರಾಧದ ಬಣ್ಣ ಬಳಿಯಲಾಗುತ್ತಿದೆ’ ಎಂದು ಸಿಪಿಐ (ಎಂ) ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ಹರಿಹಾಯ್ದಿದೆ.

ಫೆಬ್ರುವರಿಯಲ್ಲಿ ನಡೆದಿದ್ದದೆಹಲಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸಿಪಿಐ (ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಇತರ ಹೋರಾಟಗಾರರ ಹೆಸರನ್ನು ಸೇರಿಸಲಾಗಿದೆ.

‘ದೆಹಲಿ ಪೊಲೀಸರ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಇದು ಶಾಂತಿಯುತ ಪ್ರತಿಭಟನೆಗಳನ್ನು ಅಪರಾಧೀಕರಿಸುವ ಪ್ರಯತ್ನ. ಇಂತಹ ಕೃತ್ಯಗಳಿಂದ ದೂರವಿರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಸಿಪಿಐ (ಎಂ) ಪ್ರಕಟಣೆ ತಿಳಿಸಿದೆ.

ADVERTISEMENT

‘ದೆಹಲಿ ಪೊಲೀಸರ ನಡೆಯಿಂದ ನಮಗೆಲ್ಲಾ ಆಘಾತವಾಗಿದೆ. ಪೊಲೀಸರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ವಲಯದ ವ್ಯಕ್ತಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಹೆಸರುಗಳನ್ನು ಕೋಮು ಗಲಭೆಯೊಂದಿಗೆ ತಳುಕುಹಾಕಲಾಗುತ್ತಿದೆ. ಇದು ಪಕ್ಷಪಾತ ಮತ್ತು ಪ್ರತೀಕಾರದ ಕ್ರಮ’ ಎಂದು ಪಕ್ಷವು ದೂರಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆಬ್ರುವರಿಯಲ್ಲಿ ನಡೆದಿದ್ದ ಪ್ರತಿಭಟನೆಗೆ ಯೆಚೂರಿ, ಸ್ವರಾಜ್‌ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್‌, ಅರ್ಥಶಾಸ್ತ್ರಜ್ಞೆ ಜಯಂತಿ ಘೋಷ್‌ ಹಾಗೂ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ ಅವರು ಕುಮ್ಮಕ್ಕು ನೀಡಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.