ಬಿಜಾಪುರ (ಛತ್ತೀಸಗಡ) (ಪಿಟಿಐ): ಇಲ್ಲಿನಕೇಶ್ಕುಟುಲ್ ಬಳಿ ನಕ್ಸಲರೊಂದಿಗೆ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ರಾಜ್ಯದ ಯೋಧ ಸೇರಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಕಲಬುರ್ಗಿಯ ಕಮಲಾಪುರ ತಾಲ್ಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಇಂದ್ರಸೇನ್ ಪಾಟೀಲ (55) ಮೃತ ರಾಜ್ಯದ ಯೋಧ. ಇವರು ಎಎಸ್ಐ ಆಗಿದ್ದರು.
ಇವರ ಜತೆಗೆ ಮತ್ತೊಬ್ಬ ಎಎಸ್ಐ ಮದನ್ ಪಾಲ್ ಸಿಂಗ್ (52) ಹಾಗೂಹೆಡ್ ಕಾನ್ಸ್ಟೆಬಲ್ ಸಾಜು ಒ.ಪಿ (47) ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ.
ವಿವರ:ಕೇಶ್ಕುಟುಲ್ ಗ್ರಾಮದ ಸುರಂಗ ಕಾಲುವೆ ಬಳಿ ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಗುಂಡಿನ ಚಕಮಕಿ ನಡೆದಿದೆ. ಸಿಆರ್ಪಿಎಫ್ನ 199ನೇ ಬೆಟಾಲಿಯನ್, ಬೈಕ್ನಲ್ಲಿ ಕಾರ್ಯಾಚರಣೆಗೆ ಹೊರಟಾಗ ನಕ್ಸಲರು ಏಕಾಏಕಿ ಅವರ ಮೇಲೆ ಗುಂಡಿನ ಮಳೆ ಸುರಿಸಿದರು. ಕೂಡಲೇ ಸಿಆರ್ಪಿಎಫ್ನ ಯೋಧರೂ ಪ್ರತಿದಾಳಿ ನಡೆಸಿದರು ಎಂದು ಬಿಜಾಪುರ ಪೊಲೀಸರಿಂದ ಮಾಹಿತಿ ದೊರೆತಿರುವು
ದಾಗಿಕಮಲಾಪುರ ಪಿಎಸ್ಐ ಶಿವಶಂಕರ್ ಸಾಹು ತಿಳಿಸಿದ್ದಾರೆ. ಜುಲೈ 1ರಂದು ಮಹಾದೇವ ಅವರ ಪುತ್ರಿಯ ಸೀಮಂತ ನಿಗದಿಯಾಗಿತ್ತು.ಇದರಲ್ಲಿ ಪಾಲ್ಗೊಳ್ಳಲು ಅವರು ಶುಕ್ರವಾರ ಸಂಜೆ ಅಲ್ಲಿಂದ ಹೊರಡುವವರಿದ್ದರು.
ಹುತಾತ್ಮ ಯೋಧನ ಸ್ವಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.