ADVERTISEMENT

‘ಫೆಂಜಲ್‌’ ಚಂಡಮಾರುತದ ಅಬ್ಬರ | ಪುದುಚೇರಿ, ತಮಿಳುನಾಡಿನಲ್ಲಿ 8 ಸಾವು

ನಿರಂತರ ಮಳೆಯ ಕಾರಣ ರಕ್ಷಣಾ ಕಾರ್ಯಕ್ಕೆ ತೊಡಕು

ಪಿಟಿಐ
Published 1 ಡಿಸೆಂಬರ್ 2024, 22:30 IST
Last Updated 1 ಡಿಸೆಂಬರ್ 2024, 22:30 IST
ಪುದುಚೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ರಕ್ಷಣಾ ಪಡೆಗಳು ಭಾನುವಾರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ಪುದುಚೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ರಕ್ಷಣಾ ಪಡೆಗಳು ಭಾನುವಾರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ   

ಚೆನ್ನೈ: ಪುದುಚೇರಿ ಹಾಗೂ ತಮಿಳುನಾಡಿನ ಕರಾವಳಿ ಭಾಗದ ಕೆಲವು ಜಿಲ್ಲೆಗಳಲ್ಲಿ ‘ಫೆಂಜಲ್‌’ ಚಂಡಮಾರುತವು ಸುಮಾರು ಆರು ತಾಸು ತನ್ನ ಪ್ರಭಾವ ಬೀರಿತ್ತು. ಇದರ ಪರಿಣಾಮವಾಗಿ ತಮಿಳುನಾಡಿನ ವಿಲಪ್ಪುರಂ ಜಿಲ್ಲೆಯಲ್ಲಿ 50 ಸೆಂ.ಮೀ ಹಾಗೂ ಪುದುಚೇರಿಯಲ್ಲಿ 48 ಸೆಂ.ಮೀನಷ್ಟು ಮಳೆ ಸುರಿದಿದೆ. ಚಂಡಮಾರುತದ ಕಾರಣದಿಂದಾಗಿ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ತಲಾ ನಾಲ್ವರು ಮೃತಪಟ್ಟಿದ್ದಾರೆ.

ತಮಿಳುನಾಡು ಹಾಗೂ ಪುದುಚೇರಿಯ ಹಲವು ಗ್ರಾಮಗಳು, ನಗರಗಳು ಭಾನುವಾರ ಇಡೀ ದಿನ ದ್ವೀಪಗಳಂತಾಗಿದ್ದವು. ಚೆನ್ನೈನಲ್ಲಿ ಜನಜೀವನವು ಯಥಾಸ್ಥಿತಿಗೆ ನಿಧಾನಗತಿಯಲ್ಲಿ ಮರಳುತ್ತಿದೆ. ವಿಮಾನ ಹಾರಾಟ ಹಾಗೂ ರೈಲುಗಳ ಓಡಾಡಲು ಪುನಃ ಆರಂಭಗೊಂಡಿವೆ. ಆದರೂ ಕೆಲವು ವಿಮಾನಗಳ ಹಾರಾಟ ವಿಳಂಬವಾಯಿತು ಅಥವಾ ರದ್ದಾಯಿತು.

ವಿಲುಪ್ಪುರಂ ಹಾಗೂ ಚೆಂಗಲ್‌ಪಟ್ಟು ಜಿಲ್ಲೆಗಳಲ್ಲಿ ಹಿಂದೆಂದೂ ಇಷ್ಟು ಮಳೆ ಸುರಿದಿರಲಿಲ್ಲ. ‘ನಮ್ಮ ಜೀವಮಾನದಲ್ಲಿಯೇ ಇಲ್ಲಿ ಇಷ್ಟೊಂದು ಮಳೆಯಾಗಿರುವುದನ್ನು ನಾವು ನೋಡಿಲ್ಲ’ ಎನ್ನುತ್ತಾರೆ ಚೆಂಗಲ್‌ಪಟ್ಟು ನಿವಾಸಿಗಳು. ನಿರಂತರ ಮಳೆ ಸುರಿಯುತ್ತಿದ್ದ ಕಾರಣ ರಕ್ಷಣಾ ಕಾರ್ಯದಲ್ಲಿ ಅಡಚಣೆ ಉಂಟಾಗಿದೆ. 

ADVERTISEMENT

ಕೇಂದ್ರಕ್ಕೆ ಮೊರೆ: ‘ವಿಲುಪ್ಪುರಂ, ಕಡಲೂರು ಹಾಗೂ ಚೆಂಗಲ್‌ಪೇಟೆಗಳಲ್ಲಿ ಸಂಭವಿಸಿರುವ ನಷ್ಟವನ್ನು ಅಂದಾಜಿಸಲು ತಂಡವೊಂದನ್ನು ಕಳುಹಿಸಿಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಇನ್ನೂವರೆಗೂ ಮಳೆ ನಿಲ್ಲದ ಕಾರಣ ಪರಿಹಾರ ಕಾರ್ಯಕ್ಕೆ ತೊಡಕಾಗಿದೆ. ಜೊತೆಗೆ, ಬೆಳೆ ಹಾನಿಯ ಕುರಿತೂ ಪರಿಶೀಲನೆ ನಡೆಸಲು ಆಗುತ್ತಿಲ್ಲ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹೇಳಿದರು.

ಪುದುಚೇರಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ರಕ್ಷಣಾ ಪಡೆಗಳು ಭಾನುವಾರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದರು –ಪಿಟಿಐ ಚಿತ್ರ
ತಮಿಳುನಾಡಿನ ವಿಲಪ್ಪುರಂ ಜಿಲ್ಲೆಯ ಬಸ್‌ ನಿಲ್ದಾಣದಲ್ಲಿ ಭಾನುವಾರ ನೀರು ನಿಂತಿತ್ತು –ಪಿಟಿಐ ಚಿತ್ರ

ಪುದುಚೇರಿ ತಮಿಳುನಾಡು ವಿಲಪ್ಪುರಂ ಕಡಲೂರು ಚೆಂಗಲ್‌ಪೇಟೆ ಬಂಗಾಳ ಕೊಲ್ಲಿ ‘ಫೆಂಜಲ್‌’ ಚಂಡಮಾರುತದ ಮಾರ್ಗ ಸೋಮವಾರ ಬೆಳಿಗ್ಗೆಯ ಹೊತ್ತಿಗೆ ಚಂಡಮಾರುತವು ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳಲಿದೆ ‘ಫೆಂಗಲ್‌’ನಿಂದ ತೀವ್ರ ಮಳೆಯಾದ ಪ್ರದೇಶಗಳು

ಗಾಳಿಯು ನಿಧಾನವಾಗಿ ತಮಿಳುನಾಡು ಕರಾವಳಿಯ ಉತ್ತರಕ್ಕೆ ಸಾಗುತ್ತಿದೆ. ಮುಂದಿನ 12 ಗಂಟೆಗಳಲ್ಲಿ ‘ಫೆಂಜಲ್’ ಚಂಡಮಾರುತವು ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳಲಿದೆ
ಭಾರತೀಯ ಹವಾಮಾನ ಇಲಾಖೆ
ಸಮುದ್ರದ ಅಲೆಗಳು ಎತ್ತರವಾಗಿ ಬಡಿಯುತ್ತಿವೆ. ಈ ಕಾರಣಕ್ಕೆ ನಗರ ಪ್ರದೇಶಗಳಲ್ಲಿ ಸುರಿದ ಮಳೆ ನೀರು ಸಮುದ್ರಕ್ಕೆ ಸೇರುತ್ತಿಲ್ಲ. ಇದರಿಂದಲೇ ಪುದುಚೇರಿಯಲ್ಲಿ ಪ್ರವಾಹ ಉಂಟಾಗಿದೆ
ಎನ್‌.ರಂಗಸ್ವಾಮಿ ಮುಖ್ಯಮಂತ್ರಿ ಪುದುಚೇರಿ
ಮುಂದಿನ ಆದೇಶದವರೆಗೂ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಶಾಲಾ–ಕಾಲೇಜುಗಳನ್ನೇ ನಿರಾಶ್ರಿತರ ಶಿಬಿರಗಳನ್ನಾಗಿ ರೂಪಿಸುವ ಯೋಜನೆ ಇದೆ
ಎ. ಕುಲೋತುಂಗನ್‌ ಜಿಲ್ಲಾಧಿಕಾರಿ ಪುದುಚೇರಿ

ಮೂರು ದಶಕಗಳಲ್ಲೇ ಅಧಿಕ ಮಳೆ ಪುದುಚೇರಿಯಲ್ಲಿ 48 ಸೆಂ.ಮೀನಷ್ಟು ಮಳೆ ಸುರಿದಿದೆ. ಕಳೆದ 3 ದಶಕಗಳಲ್ಲೇ ಸುರಿದಿರುವ ಅಧಿಕ ಮಳೆ ಇದು. 2004 ಅಕ್ಟೋಬರ್‌ನಲ್ಲಿ ಪುದುಚೇರಿಯಲ್ಲಿ 24 ಸೆಂ.ಮೀನಷ್ಟು ಮಳೆಯಾಗಿತ್ತು. ಇಲ್ಲಿನ ಜನರು ಮನೆಯಿಂದ ಹೊರಬರದಂಥ ಪರಿಸ್ಥಿತಿ ಉಂಟಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ನೂರಾರು ಮರಗಳು ಧರೆಗುರುಳಿವೆ. ಜನದಟ್ಟಣೆ ಹೆಚ್ಚಿರುವ ವಸತಿ ಪ್ರದೇಶಗಳ ರಸ್ತೆಗಳಲ್ಲಿ ಸುಮಾರು 5 ಅಡಿ ನೀರು ನಿಂತಿದೆ. ಇದರಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯುಂಟಾಗಿದೆ. ನೆಲಮಹಡಿಯಲ್ಲಿ ವಾಸಿಸುವ ಜನರು ಮೊದಲ ಅಥವಾ ಎರಡನೇ ಮಹಡಿಯಲ್ಲಿ ಆಶ್ರಯ ಪಡೆಯುವಂತಾಗಿದೆ. ರಸ್ತೆಯಲ್ಲಿ ನೀರು ನಿಂತಿರುವ ಕಾರಣ ಸಂತ್ರಸ್ತರಿಗೆ ಆಹಾರ–ನೀರು ವಿತರಣೆಗೂ ಅಡಚಣೆಯಾಗಿದೆ. * ಮಳೆ ನೀರು ನಿಂತಿದ್ದ ಕಾರಣ ತಮಿಳುನಾಡು–ಪುದುಚೆರಿಯ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು * 60 ಸೈನಿಕರ ಎರಡು ತಂಡಗಳ ರಚನೆ. ಒಟ್ಟು 600 ಜನರ ರಕ್ಷಣೆ * ಶನಿವಾರ ರಾತ್ರಿ 11 ಗಂಟೆಯಿಂದ ವಿದ್ಯುತ್‌ ಕಡಿತ. ಕೃಷಿ ಜಮೀನುಗಳಲ್ಲಿ ನಿಂತ ಮಳೆ ನೀರು

- ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ‘ಮೆಟ್ರೊಪಾಲಿಟನ್‌ ನಗರಗಳ ಕುರಿತು ಮಾತ್ರವೇ ಗಮನಹರಿಸಲಾಗುತ್ತದೆ. ಚಂಡಮಾರುತ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದರೂ ನಗರ ಪ್ರದೇಶಗಳಲ್ಲಿ ಮಾತ್ರವೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ನಗರಗಳ ಸುತ್ತಮುತ್ತಲಿನ ‍ಪ್ರದೇಶಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಪುದುಚೇರಿ ಅಥವಾ ವಿಲಿಪ್ಪುರಂ ಜಿಲ್ಲೆಗಳಲ್ಲಿ ಯಾವುದೇ ರಕ್ಷಣಾ ತಂಡಗಳು ಕಾಣಸಿಗಲಿಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.