ಪಣಜಿ:‘ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಗೋವಾದ ಹಲವೆಡೆ ಭಾನುವಾರ ಮುಂಜಾನೆ ಭಾರಿ ಗಾಳಿ, ಮಳೆಯಾಗಿದೆ. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾಗಾಗಿ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ’ ಎಂದುಗೋವಾ ಇಂಧನ ಸಚಿವ ನಿಲೇಶ್ ಕ್ಯಾಬ್ರಲ್ ಅವರು ಹೇಳಿದರು.
‘ನೂರಾರು ವಿದ್ಯುತ್ ಕಂಬಗಳು ಮುರಿದು ಹೋಗಿವೆ. ಮಹಾರಾಷ್ಟ್ರದಿಂದ ಗೋವಾಗೆ ವಿದ್ಯುತ್ ಪೂರೈಕೆ ಮಾಡುವ 220 ಕೆ.ವಿ ಮಾರ್ಗಗಳು ಕೂಡ ಹಾನಿಗೀಡಾಗಿವೆ. ರಾಜ್ಯದಲ್ಲಿ ಬೀಸುತ್ತಿರುವ ಅಬ್ಬರದ ಗಾಳಿಯಿಂದ ಇದಕ್ಕೆ ದುರಸ್ತಿ ಕಾರ್ಯಕ್ಕೂ ತೊಂದರೆ ಉಂಟಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.
‘ಗೋವಾದ ಅಗ್ನಿ ಮತ್ತು ತುರ್ತು ಸೇವೆಯ ವಿಭಾಗವು ಶನಿವಾರ ರಾತ್ರಿಯಿಂದಲೇ ರಸ್ತೆ ಮತ್ತು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಮರಗಳನ್ನು ತೆರೆವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ’ ಎಂದು ವಿಭಾಗದ ನಿರ್ದೇಶಕ ಅಶೋಕ್ ಮೆನನ್ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.