ADVERTISEMENT

ರಾಜಸ್ಥಾನ | ದೇವರ ಬಗ್ಗೆ ಟೀಕೆ: ದಲಿತ ವ್ಯಕ್ತಿ ಮೇಲೆ ದೌರ್ಜನ್ಯ

ಅಲ್ವಾರ್ ಜಿಲ್ಲೆಯಲ್ಲಿ ದುಷ್ಕೃತ್ಯ

ಪಿಟಿಐ
Published 23 ಮಾರ್ಚ್ 2022, 19:45 IST
Last Updated 23 ಮಾರ್ಚ್ 2022, 19:45 IST
ದೇವಸ್ಥಾನದ ಜಗುಲಿಗೆ ದಲಿತ ವ್ಯಕ್ತಿಯ ಮೂಗು ತಿಕ್ಕಿಸಿದ ಘಚನೆ ರಾಜಸ್ಥಾನದಲ್ಲಿ ನಡೆದಿದೆ
ದೇವಸ್ಥಾನದ ಜಗುಲಿಗೆ ದಲಿತ ವ್ಯಕ್ತಿಯ ಮೂಗು ತಿಕ್ಕಿಸಿದ ಘಚನೆ ರಾಜಸ್ಥಾನದಲ್ಲಿ ನಡೆದಿದೆ   

ಜೈಪುರ: ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎನ್ನಲಾದ ದಲಿತ ವ್ಯಕ್ತಿಯನ್ನು ಎಳೆದೊಯ್ದು ಆತನ ಮೂಗನ್ನು ದೇಗುಲದ ಜಗುಲಿಗೆ ತಿಕ್ಕಿಸಿದ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ 11 ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಇನ್ನಿತರ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಈ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಕೆಲ ದಿನಗಳ ಹಿಂದೆ ರಾಜೇಶ್ ಕುಮಾರ್ ಮೇಘ್ವಾಲ್ ತಮ್ಮ ಫೇಸ್‌ಬುಕ್‌ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಟೀಕಿಸಿದ್ದರು. ಅಲ್ಲದೆ ದೌರ್ಜನ್ಯಗಳು ಕೇವಲ ಪಂಡಿತರ ಮೇಲಷ್ಟೇ ನಡೆದಿವೆಯೇ, ದಲಿತರ ಮೇಲೆ ನಡೆದಿಲ್ಲವೇ ಎಂದು ಪ್ರಶ್ನಿಸಿದ್ದರು. ಈ ಪೋಸ್ಟ್‌ಗೆ ಕೆಲವರು ಜೈ ಶ್ರೀರಾಮ್ ಮತ್ತು ಜೈ ಶ್ರೀಕೃಷ್ಣ ಎಂದು ಪ್ರತಿಕ್ರಿಯೆ ನೀಡಿದ್ದರು. ಈ ವೇಳೆ ದೇವರ ಬಗ್ಗೆ ಮೇಘ್ವಾಲ್ ಅವರು ಅವಹೇಳನಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದರು. ಆದರೆ, ತಮ್ಮ ತಪ್ಪಿನ ಅರಿವಾಗಿ ಮೇಘ್ವಾಲ್ ಅವರು ಕ್ಷಮಾಪಣೆಯನ್ನೂ ಕೋರಿದ್ದರು. ಆದರೆ ಕೆಲವು ಸ್ಥಳೀಯರು ಮೇಘ್ವಾಲ್ ಅವರನ್ನು ದೇವಸ್ಥಾನಕ್ಕೆ ಎಳೆದೊಯ್ದು, ಬಲವಂತದಿಂದ ದೇವಸ್ಥಾನದ ಜಗುಲಿಗೆ ಮೂಗು ತಿಕ್ಕಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.