ADVERTISEMENT

ಸಾರ್ವಜನಿಕ ಸಂಪತ್ತಿಗೆ ಹಾನಿ; ದಾಳಿಕೋರರಿಂದಲೇ ನಷ್ಟ ಭರ್ತಿ ಎಂದ ಯೋಗಿ ಆದಿತ್ಯನಾಥ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 8:30 IST
Last Updated 12 ಜೂನ್ 2022, 8:30 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ   

ಲಖನೌ:ಸಾರ್ವಜನಿಕ ಸಂಪತ್ತಿಗೆ ಹಾನಿಯಾಗುವಪ್ರತಿಯೊಂದು ಪ್ರಕರಣದಲ್ಲಿಯೂ ದಾಳಿಕೋರರಿಂದಲೇ ನಷ್ಟ ಭರ್ತಿ ಮಾಡಲಾಗುವುದು. ವಸೂಲಾತಿಗೆ ಸಂಬಂಧಿಸಿದಂತೆ ನೋಟಿಸ್‌ ಕಳುಹಿಸುವ ಪ್ರಕ್ರಿಯೆಪ್ರಯಾಗರಾಜ್‌ನಲ್ಲಿ ಆರಂಭವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.

ಪ್ರವಾದಿ ಮಹಮ್ಮದ್‌ ಕುರಿತಂತೆ ನೀಡಿದ್ದ ಅವಹೇಳನಕಾರಿ ಹೇಳಿಕೆ ಸಂಬಂಧನೂಪುರ್‌ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ, ಮುಸ್ಲಿಮರು ಶುಕ್ರವಾರದ ಪ್ರಾರ್ಥನೆ ಮುಗಿದ ಬಳಿಕ ಪ್ರತಿಭಟಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

'ರಾಜ್ಯದ 9 ಜಿಲ್ಲೆಗಳಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 13 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಎಂಟು ಜಿಲ್ಲೆಗಳಲ್ಲಿ 304 ಜನರನ್ನು ಬಂಧಿಸಲಾಗಿದೆ' ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

ಮುಂದುವರಿದು, 'ಪ್ರಯಾಗ್‌ರಾಜ್‌ನಲ್ಲಿ 91 ಮಂದಿಯನ್ನು ಬಂಧಿಸಲಾಗಿದೆ. ಅದೇರೀತಿ, ಸಹರಾನ್‌ಪುರದಲ್ಲಿ 71, ಹತರಾಸ್‌ನಲ್ಲಿ 51,ಫಿರೋಜಾಬಾದ್‌ನಲ್ಲಿ 15, ಅಂಬೇಡ್ಕರ್‌ನಗರ ಮತ್ತು ಮೊರಾದಾಬಾದ್‌ನಲ್ಲಿ ತಲಾ 34 ಜನರನ್ನು ಬಂಧಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಶನಿವಾರ ಮಾತನಾಡಿದ್ದ ಯೋಗಿ,ಕಳೆದ ಕೆಲವು ದಿನಗಳಿಂದ ಹಲವು ನಗರಗಳಲ್ಲಿ ಅಶಾಂತಿ ಮೂಡಿಸುತ್ತಿರುವವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. 'ನಾಗರಿಕ ಸಮಾಜದಲ್ಲಿ ಇಂತಹ ಸಮಾಜ ವಿರೋಧಿಗಳಿಗೆ ಜಾಗವಿಲ್ಲ. ಯಾವೊಬ್ಬ ಅಮಾಯಕನಿಗೂ ತೊಂದರೆಯಾಗಬಾರದು. ಅದೇರೀತಿ ಯಾವೊಬ್ಬ ತಪ್ಪಿತಸ್ಥನೂ ತಪ್ಪಿಸಿಕೊಳ್ಳಬಾರದು' ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.