ADVERTISEMENT

ಕೋವಿಡ್ ಸೋಂಕಿತ ಮಾವೋವಾದಿಗಳು ಶರಣಾದರೆ ಉಚಿತ ಚಿಕಿತ್ಸೆ: ದಾಂತೇವಾಡ ಪೊಲೀಸರ ಭರವಸೆ

ಏಜೆನ್ಸೀಸ್
Published 9 ಮೇ 2021, 2:37 IST
Last Updated 9 ಮೇ 2021, 2:37 IST
   

ದಾಂತೇವಾಡ (ಛತ್ತೀಸಗಡ): ಜಿಲ್ಲೆಯಲ್ಲಿ ಮಾವೋವಾದಿಗಳು ನಿರಂತರವಾಗಿ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ ಹಾಗೂ ವಿಷಾಹಾರ ಸೇವನೆಯಿಂದ ಬಳಲುತ್ತಿದ್ದಾರೆ. ಅವರು ಶರಣಾದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದುಇಲ್ಲಿನ ಪೊಲೀಸರು ಭರವಸೆ ನೀಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿಷೇಕ್‌ ಪಲ್ಲವ್‌ ಈ ಸಂಬಂಧ ಮಾತನಾಡಿದ್ದು, ʼಮಾವೋವಾದಿ ಸಂಘಟನೆಗಳ ನಾಯಕರು‌ ಕೋವಿಡ್ ಮತ್ತು ವಿಷಾಹಾರ ಸೇವನೆಯಿಂದ ಬಳಲುತ್ತಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿಕೆಎಸ್‌ಜಡ್‌ಸಿ) ನಾಯಕಿ ಸುಜಾತಾರಂತಹ ಇನ್ನೂ ಕೆಲ ನಾಯಕರು ಕೋವಿಡ್‌ನಿಂದ ಬಳಲುತ್ತಿದ್ದಾರೆ. ಸುಜಾತಾಗೆ ಉಸಿರಾಟದ ತೊಂದರೆಯಿದ್ದು, ಚಲಿಸಲು ಸಾಧ್ಯವಾಗುತ್ತಿಲ್ಲʼ ಎಂದು ಮಾಹಿತಿ ನೀಡಿದ್ದಾರೆ.

ಮುಂದುವರಿದು, ʼಮಾವೋವಾದಿಗಳು ಚಿಕಿತ್ಸೆ ಪಡೆಯದೆ ತಮ್ಮ ಜೀವನವನ್ನು ಸಂಕಷ್ಟಕ್ಕೆ ದೂಡಿಕೊಂಡಿದ್ದಾರೆ. ಜೊತೆಗೆ ಗ್ರಾಮಸ್ಥರಿಗೂ ಸೊಂಕು ಹರಡುವ ಮೂಲಕ ಹಾನಿಯುಂಟು ಮಾಡುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.

ADVERTISEMENT

ʼಇನ್ನೂ ಹಲವು ನಾಯಕರು ಮತ್ತು ಸದಸ್ಯರು ಈ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಅವಧಿ ಮುಗಿದ ಆಹಾರ ಸೇವಿಸಿದ್ದರಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮಾವೋವಾದಿಗಳು ಶರಣಾಗಬೇಕು ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆʼ ಎಂದು ಒತ್ತಾಯಿಸಿದ್ದಾರೆ.

ಹಾಗೆಯೇ, ಛತ್ತೀಸಗಡ ಪೊಲೀಸರು ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.