ADVERTISEMENT

ಅಗ್ನಿಪಥಕ್ಕೆ ವಿರೋಧ: ಮತ್ತೊಂದು ಸಭೆ ಕರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2022, 5:09 IST
Last Updated 19 ಜೂನ್ 2022, 5:09 IST
ರಕ್ಷಣಾ ಸಚಿವ ರಾಜನಾಥ್
ರಕ್ಷಣಾ ಸಚಿವ ರಾಜನಾಥ್   

ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಸೇನಾ ನೇಮಕಾತಿ ಯೋಜನೆ ಅಗ್ನಿಪಥದ ವಿರುದ್ಧ ದೇಶದಾದ್ಯಂತ ಸೇನಾ ಭರ್ತಿ ಆಕಾಂಕ್ಷಿಗಳು ಹಾಗೂ ಹಲವರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರವಾಗಿದೆ.

ಏತನ್ಮಧ್ಯೆ ನಿನ್ನೆಯಷ್ಟೇ ಅಗ್ನಿಪಥ ವಿರುದ್ಧದ ಪ್ರತಿಭಟನೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯ ಮೂರೂ ವಿಭಾಗದ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದರು. ಆದರೆ, ಪ್ರತಿಭಟನೆಗಳು ಮತ್ತಷ್ಟು ರಾಜ್ಯಗಳಿಗೆ ವ್ಯಾಪಿಸಿರುವುದರಿಂದ ಸಚಿವರನ್ನು ಆತಂಕಕ್ಕೆ ಈಡು ಮಾಡಿದೆ.

ಈ ಹಿನ್ನೆಲೆಯಲ್ಲಿ ಇಂದು ಕೂಡ ರಾಜನಾಥ್ ಸಿಂಗ್ ಅವರು ಸೇನಾ ನಾಯಕರ ಜೊತೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ದೆಹಲಿಯ ತಮ್ಮ ನಿವಾಸಲ್ಲಿ ರಾಜನಾಥ್ ಸಿಂಗ್ ಅವರು ಸಭೆ ನಡೆಸಲಿದ್ದಾರೆ.ಕೇವಲ 24 ಗಂಟೆಯಲ್ಲಿ ರಕ್ಷಣಾ ಸಚಿವರು ಎರಡನೇ ಭಾರಿಗೆ ಸಭೆ ಕರೆದಿದ್ದಾರೆ.

ADVERTISEMENT

ಇನ್ನೊಂದೆಡೆ ಪ್ರತಿಭಟನೆಗಳು ಉಗ್ರ ಸ್ವರೂಪ ತಾಳಿದ್ದ ಬಿಹಾರದಲ್ಲಿ ಸುಮಾರು ₹700 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಸರ್ಕಾರದ ಆಸ್ತಿ–ಪಾಸ್ತಿಗೆ ದಕ್ಕೆ ಮಾಡಿದ ಸುಮಾರು 200 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ನೇಮಕಾತಿಯ ‘ಅಗ್ನಿಪಥ’ ಯೋಜನೆ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದೆ. ಯುವಜನತೆ ಪ್ರತಿಭಟನೆಯಲ್ಲಿ ನಿರತರಾಗಿರುವ ಈ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ಅಗ್ನಪಥ ಯೋಜನೆ ವಿರುದ್ಧದ ಪ್ರತಿಭಟನೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಕನ್ಹಯ್ ಕುಮಾರ್, ಅಷ್ಟಕ್ಕೂ ಅಗ್ನಿಪಥ ಯೋಜನೆ ಅವಶ್ಯಕಥೆ ಏನಿದೆ? ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ. ಆದರೆ, ಯಾರೂ ಕೂಡ ಹಿಂಸಾತ್ಮಕ ಪ್ರತಿಭಟನೆಗಳನ್ನು ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.