ADVERTISEMENT

ಸಾವನ್ನು ಕಣ್ಣಾರೆ ಕಂಡೆ.. ಭಯಾನಕ ಸ್ಫೋಟದಲ್ಲಿ ಬದುಕುಳಿದ ಪ್ರತಾಪ್ ಮಾತು

ಪಿಟಿಐ
Published 11 ನವೆಂಬರ್ 2025, 10:17 IST
Last Updated 11 ನವೆಂಬರ್ 2025, 10:17 IST
<div class="paragraphs"><p>ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರುಗಳು ಭಾರಿ ಸ್ಪೋಟ</p></div>

ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರುಗಳು ಭಾರಿ ಸ್ಪೋಟ

   

ನವದೆಹಲಿ: ರಸ್ತೆಯಲ್ಲಿ ಎಲ್ಲೆಡೆ ರಕ್ತ ಚಲ್ಲಿತ್ತು ಹಲವರು ಅಲ್ಲಿಯೇ ಬಿದ್ದಿದ್ದರು ಕೆಲವರಿಗೆ ರಕ್ತಸ್ರಾವವಾಗುತ್ತಿತ್ತು ಇನ್ನೂ ಕೆಲವರು ಏಳಲಾಗದ ಸ್ಥಿತಿಯಲ್ಲಿದ್ದರು... ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಗಾಯಗೊಂಡು ಲೋಕನಾಯಕ್‌ ಜೈ ಪ್ರಕಾಶ್‌ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮ್‌ ಪ್ರತಾಪ್‌ ಅವರು ಘಟನೆ ಮತ್ತು ಆನಂತರದ ದೃಶ್ಯಗಳನ್ನು ನೆನಪು ಮಾಡಿಕೊಂಡಿದ್ದು ಹೀಗೆ.

‘ನಾವು ಸಾವನ್ನು ಹತ್ತಿರದಿಂದ ನೋಡಿದ್ದೇವೆ’ ಎಂದು ಹೇಳುವಾಗ ಅವರು ಕಂಪಿಸುತ್ತಿದ್ದರು. ಅವರ ಬಲಗೈಗೆ ತೀವ್ರ ಗಾಯವಾಗಿದ್ದು ಬಿಗಿಯಾಗಿ ಬ್ಯಾಂಡೇಜ್‌ ಸುತ್ತಲಾಗಿತ್ತು. ದುರ್ಘಟನೆಯಲ್ಲಿ ಬದುಕುಳಿದಿರುವ ಪ್ರತಾಪ್‌ ಅವರು ಬಿಹಾರ ಮೂಲದವರು. ಅವರು ರಸ್ತೆಬದಿಯ ತಿನಿಸು ಅಂಗಡಿಯೊಂದರ ಮಾಲೀಕರು.

‘ಕೆಲ ಗ್ರಾಹಕರಿದ್ದರು ನಾನು ಅಂಗಡಿ ಮುಚ್ಚಲು ತಯಾರಿ ನಡೆಸುತ್ತಿದ್ದೆ. ಅಷ್ಟರಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿತು. ಜನರ ಕಿರುಚಾಟ ಚೀರಾಟ ಮುಗಿಲು ಮುಟ್ಟುವಂತಿತ್ತು’ ಎಂದು ಅವರು ಸ್ಮರಿಸಿದರು. ‘ಕೆಲ ಕ್ಷಣ ಏನೂ ಕೇಳಿಸಲಿಲ್ಲ’: ‘ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಕೆಲ ಕ್ಷಣ ನನಗೆ ಏನೂ ಕೇಳಿಸಲಿಲ್ಲ.

ಗಾಜಿನ ಚೂರುಗಳು ಮೈಮೇಲೆಲ್ಲ ಬಿದ್ದಿದ್ದವು. ನನ್ನ ಕೈಯಿಂದಲೂ ತೀವ್ರವಾಗಿ ರಕ್ತಸ್ರಾವವಾಗುತ್ತಿತ್ತು. ಅದರ ಅರಿವು ನನಗೆ ಆಗ ಆಗಲಿಲ್ಲ. ಅಬ್ಬಾ... ಸಾವನ್ನು ಅಷ್ಟು ಹತ್ತಿರದಿಂದ ನೋಡಿದೆ’ ಎಂದು ಅವರು ಕಣ್ಣೀರಾದರು. ಸ್ಫೋಟ ಸಂಭವಿಸಿದಾಗ ಕೆಲ ಮೀಟರ್‌ಗಳಷ್ಟು ದೂರದಲ್ಲಿದ್ದ ಪ್ರತಾಪ್‌ ಅವರ ಸಂಬಂಧಿಕರೊಬ್ಬರು ‘ಸ್ಫೋಟ ಆದಾಗ ಬೆಂಕಿ ದಟ್ಟವಾದ ಹೊಗೆ ಆವರಿಸಿತು. ಎಲ್ಲವೂ ಕತ್ತಲಾಯಿತು. ನನಗೆ ದಿಕ್ಕೇ ತೋಚದಂತಾಯಿತು. ಸಹೋದರನ ಪತ್ತೆಯೂ ಸಾಧ್ಯವಾಗಲಿಲ್ಲ’ ಎಂದು ಹೇಳಿದರು. ‘ಜನರು ಹೆಸರುಗಳನ್ನು ಕೂಗುತ್ತಿದ್ದರು ಅಳುತ್ತಿದ್ದರು ಚೀರುತ್ತಿದ್ದರು. ಸಂಬಂಧಿಕರು ಸ್ನೇಹಿತರಿಗಾಗಿ ಹುಡುಕುತ್ತಿದ್ದರು. ಯಾರು ಜೀವಂತ ಇದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ’ ಎಂದು ಅವರು ಮೆಲುಕುಹಾಕಿದರು.

ಬಟ್ಟೆಯೆಲ್ಲ ರಕ್ತಮಯ’: ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಟ್ಯಾಂಕರ್‌ ಮಾಲೀಕ ವಿಜೇಂದರ್‌ ಯಾದವ್‌ ಅವರು ಭಯಾನಕ ದೃಶ್ಯಗಳನ್ನು ವಿವರಿಸುವಾಗ ಭಯದಿಂದ ನಡುಗುತ್ತಿದ್ದರು.

‘ಪ್ರತಾಪ್‌ ಅವರ ಅಂಗಡಿ ಸಮೀಪ ನೀರಿನ ಟ್ಯಾಂಕರ್‌ ಅನ್ನು ನಿಲ್ಲಿಸಿದೆ. ಅಷ್ಟರಲ್ಲಿಯೇ ಭಾರಿ ಸ್ಫೋಟ ಸಂಭವಿಸಿತು. ಅದು ನನ್ನನ್ನು ನೆಲಕ್ಕೆ ಅಪ್ಪಳಿಸುವಂತೆ ಮಾಡಿತು. ಮೇಲೆದ್ದಾಗ ಬಟ್ಟೆ ಪೂರ್ಣ ರಕ್ತಮಯವಾಗಿತ್ತು. ರಸ್ತೆಯಲ್ಲಿ ಗಾಜಿನ ಪುಡಿಗಳು ಮತ್ತು ದೇಹದ ತುಂಡುಗಳು ಬಿದ್ದಿದ್ದವು. ಕೆಲವರು ಚೀರುತ್ತಾ ಓಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

‘ಈ ದುರ್ಘಟನೆಯಲ್ಲಿ ನಾನು ಹೇಗೆ ಬದುಕುಳಿದಿರುವೆ ಎಂಬುದೇ ಆಶ್ಚರ್ಯವಾಗಿದೆ’ ಎಂದರು ಅವರು ಹೇಳಿದರು. ಅವರ ಕೈ ಮತ್ತು ತಲೆಗೆ ತೀವ್ರ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದವರಾದ ಯಾದವ್‌ ಎರಡು ದಶಕಕ್ಕೂ ಹೆಚ್ಚುಕಾಲದಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಪತ್ನಿ ಮತ್ತು ನಾಲ್ವರು ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.