ADVERTISEMENT

ದೆಹಲಿ ಬಜೆಟ್‌ಗೆ ಗೃಹ ಸಚಿವಾಲಯದ ಅನುಮೋದನೆ: ಲೆ.ಗೌವರ್ನರ್ ಕಚೇರಿಯಿಂದ ಮಾಹಿತಿ

ಪಿಟಿಐ
Published 21 ಮಾರ್ಚ್ 2023, 11:55 IST
Last Updated 21 ಮಾರ್ಚ್ 2023, 11:55 IST
ದೆಹಲಿ ಹಣಕಾಸು ಸಚಿವ ಕೈಲಾಶ್‌ ಗೆಹಲೋತ್
ದೆಹಲಿ ಹಣಕಾಸು ಸಚಿವ ಕೈಲಾಶ್‌ ಗೆಹಲೋತ್   

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಆಮ್‌ ಆದ್ಮಿ ಪಕ್ಷದ ವಿವಾದಗಳ ನಡುವೆ ಗೃಹ ಸಚಿವಾಲಯವು ದೆಹಲಿ ಸರ್ಕಾರದ ಬಜೆಟ್‌ಗೆ ಮಂಗಳವಾರ ಅನುಮೋದನೆ ನೀಡಿದೆ ಎಂದು ಲೆಫ್ಟಿನೆಂಟ್‌ ಗವರ್ನರ್‌ (ಎಲ್.ಜಿ) ವಿ.ಕೆ.ಸಕ್ಸೇನಾ ಅವರ ಕಚೇರಿ ಮೂಲಗಳು ತಿಳಿಸಿವೆ.

ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡುವುದಕ್ಕಾಗಿ ದೆಹಲಿ ಜನರು, ಮಾಧ್ಯಮಗಳ ದಿಕ್ಕು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಅವರ ಸಂಪುಟ ಸಚಿವರು ಹಾಗೂ ಆಮ್‌ ಆದ್ಮಿ ಪಕ್ಷದ (ಎಎಪಿ) ನಾಯಕರು ನಿರಂತರವಾಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೂ ಆರೋಪಿಸಿವೆ.

'ಅವರು (ಅರವಿಂದ ಕೇಜ್ರಿವಾಲ್‌) ಕೇಂದ್ರ ಸರ್ಕಾರವು ರಾಜ್ಯ ಬಜೆಟ್‌ ಅನ್ನು ತಡೆಹಿಡಿದಿದೆ ಎಂದು ಹೇಳಿದ್ದಾರೆ. ಇದು ಸುಳ್ಳು. ದೆಹಲಿಯು ಕೇಂದ್ರಾಡಳಿತ ಪ್ರದೇಶ, ರಾಜ್ಯವಲ್ಲ. ಹಾಗಾಗಿ ಇದು ಸಂಪೂರ್ಣವಾಗಿ ಭಾರತ ಸರ್ಕಾರದ ಒಂದು ಅಂಗ. ಅದಕ್ಕೂ ಮುಖ್ಯವಾದ ವಿಚಾರವೇನೆಂದರೆ, ಬಜೆಟ್‌ ಅನ್ನು ತಡೆಹಿಡಿದಿರಲಿಲ್ಲ' ಎಂದು ಸಕ್ಸೇನಾ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ADVERTISEMENT

ಕೇಂದ್ರ ಸರ್ಕಾರವು ದೆಹಲಿ ಬಜೆಟ್‌ ಅನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿತ್ತು. ಬಜೆಟ್‌ ಮಂಡನೆಯಾಗದಿದ್ದರೆ, ನೌಕರರ ವೇತನ ನಿಲ್ಲಿಸಲಾಗುತ್ತದೆ ಎಂದೂ ಹೇಳಿತ್ತು. ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಬಜೆಟ್‌ ಅನ್ನು ನಿಲ್ಲಿಸದಂತೆ ಮನವಿ ಮಾಡಿದ್ದರು.

ದೆಹಲಿ ಬಜೆಟ್‌ ಅನ್ನು ವಿಧಾನಸಭೆಯಲ್ಲಿ ಮಂಡಿಸುವುದಕ್ಕೂ ಮೊದಲು ರಾಷ್ಟ್ರಪತಿ ಅವರ ಅನುಮೋದನೆ ಪಡೆಯಬೇಕು ಎಂಬುದನ್ನು ಸಂವಿಧಾನ ಹೇಳುತ್ತದೆ. ಕಳೆದ 28 ವರ್ಷಗಳಿಂದ ತಪ್ಪದೆ ಇದು ನಡೆಯುತ್ತಿದೆ ಎಂದೂ ಎಲ್.ಜಿ ಕಚೇರಿ ಮೂಲಗಳು ಹೇಳಿವೆ.

'ರಾಷ್ಟ್ರಪತಿಗಳ ಅನುಮೋದನೆ ಪಡೆಯುವುದಕ್ಕೂ ಮೊದಲು ಬಜೆಟ್‌ ಮಂಡನೆಗೆ ದಿನಾಂಕ ನಿಗದಿಪಡಿಸುವುದು ತಪ್ಪು. ಇದು ಎಎಪಿ ಸರ್ಕಾರದ ದುರುದ್ದೇಶವನ್ನು ತೋರಿಸುತ್ತದೆ' ಎಂದು ಟೀಕಿಸಿವೆ.

ದೆಹಲಿ ವಿಧಾನಸಭೆಯಲ್ಲಿ ಇಂದು ಬಜೆಟ್‌ ಮಂಡನೆಗೆ ದಿನಾಂಕ ನಿಗದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.