ADVERTISEMENT

ಅಧ್ಯಕ್ಷರನ್ನೇ ಆಯ್ಕೆ ಮಾಡಲಾಗದ ಕಾಂಗ್ರೆಸ್‌ನಿಂದ ಏನು ಕೊಡುಗೆ ಸಾಧ್ಯ: ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಸೆಪ್ಟೆಂಬರ್ 2020, 3:29 IST
Last Updated 8 ಸೆಪ್ಟೆಂಬರ್ 2020, 3:29 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ತನ್ನದೇ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ‘ಸತ್ತ’ ಕಾಂಗ್ರೆಸ್‌ನಿಂದ ದೇಶಕ್ಕೆ ಏನು ಕೊಡುಗೆ ನೀಡಲು ಸಾಧ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಸಹೋದರ ಪತ್ರಿಕೆ ‘ಡೆಕ್ಕನ್ ಹೆರಾಲ್ಡ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷ ಸ್ಥಾನದ ವಿಚಾರದಲ್ಲಿ ನಿರ್ವಾತ ಸೃಷ್ಟಿಯಾಗಿದೆ. ಇದನ್ನು ಆಮ್ ಆದ್ಮಿ ಪಕ್ಷವು (ಎಎಪಿ) ತುಂಬಲಿದೆ ಎಂದು ಈಗಲೇ ಹೇಳುವುದು ಅಹಂಕಾರದ ಮಾತಾಗುತ್ತದೆ. ಯಾಕೆಂದರೆ ನಮ್ಮ ಪಕ್ಷವು ತುಂಬಾ ಚಿಕ್ಕದಾಗಿದೆ. ರಾಷ್ಟ್ರಮಟ್ಟದ ನಿರ್ವಾತವನ್ನು ತುಂಬಬಹುದೇ ಎಂಬುದನ್ನು ಸಮಯವೇ ಹೇಳಬೇಕಷ್ಟೆ ಎಂದು ಹೇಳಿದ್ದಾರೆ.

ಯಾವೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆಯೋ ಅಲ್ಲೆಲ್ಲ ತನ್ನ ಶಾಸಕರನ್ನು ಬೇರೆ ಪಕ್ಷಗಳಿಗೆ ಮಾರಾಟ ಮಾಡುವ ಮೂಲಕ ಆಡಳಿತ ಕೊನೆಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ರಾಜಕೀಯವಾಗಿ ಸವಾಲುಗಳಿದ್ದವು ಎಂಬುದಾಗಿ ಭಾವಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಸತ್ತು ಹೋಗಿದೆ ಎಂದು ಹೇಳಿದ್ದಾರೆ.

ದೇಶವು ಹಿಂದೆಂದೂ ಕಂಡಿರದಂತಹ ಸಂಕಷ್ಟ ಅನುಭವಿಸುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಆಂತರಿಕ ಕಚ್ಚಾಟಗಳಲ್ಲಿ ಮುಳುಗಿಹೋಗಿದೆ. ಜನರ ನಂಬಿಕೆ ನಶಿಸಿಹೋಗಿದೆ ಮತ್ತು ಅವರು ಮೋಸ ಹೋಗುತ್ತಿದ್ದಾರೆ. ತನ್ನದೇ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಕಾಂಗ್ರೆಸ್ ದೇಶಕ್ಕೆ ಏನು ನೀಡಬಲ್ಲದು? ಆದರೆ 2024 ಇನ್ನೂ ದೂರವಿದೆ. ಜನರು ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ನನಗೆ ನಂಬಿಕೆ ಇದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.