
ನ್ಯಾಯಾಲಯ
ನವದೆಹಲಿ: ‘ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕಾರ್ಯಕರ್ತರು ಎ.ಐ ಶೃಂಗಸಭೆಯಲ್ಲಿ ಪ್ರತಿಭಟಿಸಿದ ಮತ್ತು ನಡೆದುಕೊಂಡ ರೀತಿಯು ನ್ಯಾಯಸಮ್ಮತ ಭಿನ್ನಾಭಿಪ್ರಾಯದಂತೆ ಇಲ್ಲ. ಬದಲಿಗೆ ಅದು ಸಾರ್ವಜನಿಕ ವ್ಯವಸ್ಥೆ ಮೇಲಿನ ಸ್ಪಷ್ಟ ದಾಳಿಯಾಗಿದೆ’ ಎಂದು ದೆಹಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಐವೈಸಿ ಕಾರ್ಯಕರ್ತರ ನಡವಳಿಕೆಯಿಂದ ದೇಶದ ರಾಜತಾಂತ್ರಿಕತೆಯ ಪ್ರತಿಷ್ಠೆಗೂ ಧಕ್ಕೆಯಾಗಿದೆ ಎಂದು ಅದು ಹೇಳಿದೆ.
‘ಭಾರತ ಮಂಟಪ’ ಸಭಾಂಗಣದಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ ಐವೈಸಿಯ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಶನಿವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ನ್ಯಾಯಾಧೀಶ ರವಿ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಆರೋಪಿಗಳನ್ನು ಐದು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು.
‘ಜಾಗತಿಕ ಮಟ್ಟದ ಶೃಂಗದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು, ಗಣ್ಯರು ಭಾಗವಹಿಸಿದ್ದರು. ಈ ಸಮಾವೇಶ ನಡೆಯುತ್ತಿದ್ದಾಗ ಒಳನುಗ್ಗಿ ಆಕ್ರಮಣಕಾರಿ ಘೋಷಣೆಗಳನ್ನು ಹೊಂದಿರುವ ಟಿ–ಶರ್ಟ್ಗಳನ್ನು ಧರಿಸಿ ಪ್ರತಿಭಟಿಸಿದ್ದಾರೆ. ಅದನ್ನು ತಡೆಯಲು ಬಂದ ಪೊಲೀಸರ ಮೇಲೆ ಗಂಭೀರ ಗಾಯಗಳಾಗುವಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಅವರ ಮೇಲಿವೆ’ ಎಂದು ಆದೇಶದಲ್ಲಿ ಹೇಳಲಾಗಿದೆ.
‘ಪ್ರತಿಭಟನಕಾರರ ಈ ನಡವಳಿಕೆಯು ಕಾರ್ಯಕ್ರಮದ ಪಾವಿತ್ರ್ಯವನ್ನಷ್ಟೆ ಅಲ್ಲದೆ, ವಿದೇಶಿ ಗಣ್ಯರ ಮುಂದೆ ದೇಶದ ರಾಜತಾಂತ್ರಿಕ ಪ್ರತಿಷ್ಠೆಗೂ ಧಕ್ಕೆ ತಂದಿದೆ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.