ಮುಂಬೈ: ದೇಶದ ಪ್ರಸಿದ್ಧ ಹಾಗೂ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸಿಕೊಂಡಿರುವ ಮುಂಬೈನ ಸಿದ್ಧಿವಿನಾಯಕ ದೇಗುಲದ ಸಂಪತ್ತು ಭಕ್ತರೊಬ್ಬರ ಕೊಡುಗೆಯೊಂದಿಗೆ ಮತ್ತಷ್ಟು ಹೆಚ್ಚಾಗಿದೆ. ಕಳೆದ ವಾರ ದೆಹಲಿ ಮೂಲದ ಭಕ್ತರೊಬ್ಬರು₹14 ಕೋಟಿ ಮೌಲ್ಯದ 35 ಕೆ.ಜಿ ಚಿನ್ನವನ್ನು ದೇಗುಲಕ್ಕೆಕಾಣಿಕೆಯಾಗಿ ನೀಡಿದ್ದಾರೆ.
ಮುಂಬೈನ ಸಿದ್ಧಿ ವಿನಾಯಕ ದೇಗುಲಕ್ಕೆ ಪ್ರತಿ ತಿಂಗಳೂ ಕೋಟ್ಯಂತರ ಮೊತ್ತದ ಕಾಣಿಕೆ, ಕೊಡುಗೆಗಳು ಸಲ್ಲಿಕೆಯಾಗುತ್ತವೆ. ಹಣದ ರೂಪದಲ್ಲೂ ಕಾಣಿಕೆ ಹರಿದು ಬರುತ್ತದೆ. ಇದರ ಜೊತೆಗೆ ಚಿನ್ನ, ಬೆಳ್ಳಿ, ರತ್ನಗಳನ್ನೂ ಕಾಣಿಕೆಯಾಗಿ ನೀಡಲಾಗುತ್ತದೆ.
ಬಂಗಾರದ ಕಾಣಿಕೆ ಬಗ್ಗೆ ಮಾತನಾಡಿರುವ ಸಿದ್ಧಿವಿನಾಯಕ ದೇಗುಲ ಟ್ರಸ್ಟ್ ಸದಸ್ಯ ಆದೇಶ್ ಬಂಡೇಕರ್, ‘ಕಳೆದ ವಾರ ಭಕ್ತರೊಬ್ಬರು 35 ಕೆ.ಜಿ ಚಿನ್ನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ, ಅವರ ಹೆಸರು ಹೇಳಲು ಸಾಧ್ಯವಿಲ್ಲ. ಅವರು ನೀಡಿದ ಚಿನ್ನದಿಂದ ದೇಗುಲದ ದ್ವಾರ ಮತ್ತು ಛಾವಣಿಗೆ ಹೊದಿಕೆ ಮಾಡಿಸಲಾಗಿದೆ,’ ಎಂದು ಹೇಳಿದ್ದಾರೆ.
ಜ.15–19ರ ವರೆಗೆ ದೇಗುಲವನ್ನು ನಾಲ್ಕು ದಿನಗಳ ಕಾಲ ಮುಚ್ಚಲಾಗಿತ್ತು. ಈ ವೇಳೆ ದೇಗುಲಕ್ಕೆ ಚಿನ್ನದ ಹೊದಿಕೆಗಳನ್ನು ಮಾಡಲಾಗಿದೆ. ಇದೇ ಅವಧಿಯಲ್ಲೇ ದೇವರ ವಿಗ್ರಹಕ್ಕೆ ಕೇಸರಿ ಬಣ್ಣದ ಲೇಪ ನೀಡಲಾಗಿದೆ. ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಲಾಗಿದೆ.
220 ವರ್ಷಗಳಿಗೂ ಮಿಗಿಲಾದ ಇತಿಹಾಸವಿರುವ ಮುಂಬೈನ ಈ ವಿನಾಯಕ ದೇಗುಲಕ್ಕೆ 2017ರ ವರೆಗೆ ₹ 320 ಕೋಟಿ ಮೌಲ್ಯದ ಕಾಣಿಕೆ ಸಲ್ಲಿಕೆಯಾಗಿದೆ. ಈಗ ಅದರ ಮೊತ್ತ ₹410 ಕೋಟಿಗೆಏರಿದೆ. ದೇಗುಲ ಈ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.