ನವದೆಹಲಿ: ದೀಪಾವಳಿ ಹಬ್ಬಕ್ಕೆಂದು ಪಟಾಕಿ ಸಿಡಿಸುವ ವೇಳೆ ನಾಲ್ಕು ಅಂತಸ್ತಿನ ವಸತಿ ಕಟ್ಟಡಕ್ಕೆ ಬೆಂಕಿ ತಗುಲಿದ್ದು, ಕಟ್ಟಡದಲ್ಲಿದ್ದ 7 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪಶ್ಚಿಮ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ.
‘ಸೋಮವಾರ ರಾತ್ರಿ 9.49ರ ಸುಮಾರಿಗೆ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪಿಸಿಆರ್ ಕರೆ ಬಂದಿತ್ತು. ಆ ವೇಳೆ ಮೂರು ಕುಟುಂಬಗಳ 7 ಜನರು ಕಟ್ಟಡದೊಳಗಿದ್ದರು. ಅಗ್ನಿಶಾಮಕ ದಳವು ಬರುವ ಮುಂಚೆಯೇ ಹಗ್ಗದ ಸಹಾಯದಿಂದ ನಾಲ್ವರನ್ನು ಪೊಲೀಸರು ರಕ್ಷಿಸಿದ್ದರು’ ಎಂದು ಉಪ ಪೊಲೀಸ್ ಆಯುಕ್ತ ಅಂಕಿತ್ ಸಿಂಗ್ ತಿಳಿಸಿದ್ದಾರೆ.
ಉಳಿದ ಮೂವರನ್ನು ಅಗ್ನಿಶಾಮಕ ದಳದ ಸಹಾಯದಿಂದ ರಕ್ಷಿಸಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ.
‘ದೀಪಾವಳಿಗೆಂದು ಪಟಾಕಿ ಸಿಡಿಸುವ ವೇಳೆ ಕಟ್ಟಡಕ್ಕೆ ಬೆಂಕಿ ತಗುಲಿದೆ. ಘಟನೆಯಿಂದಾಗಿ ವಸತಿ ಕಟ್ಟಡದ ಮೊದಲ ಎರಡು ಮಹಡಿಗಳಿಗೆ ಅಪಾರ ಹಾನಿಯಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.