ADVERTISEMENT

ದೆಹಲಿ | ಪ್ರವಾಹ ಪರಿಸ್ಥಿತಿ ಸುಧಾರಣೆ, ಸಂಚಾರಕ್ಕೆ ಮುಕ್ತಗೊಂಡ ಕೆಲವು ರಸ್ತೆಗಳು

ಪಿಟಿಐ
Published 17 ಜುಲೈ 2023, 3:22 IST
Last Updated 17 ಜುಲೈ 2023, 3:22 IST
   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರವಾಹ ಪರಿಸ್ಥಿತಿ ಸುಧಾರಿಸಿದ್ದು, ಭೈರೋನ್‌ ಮಾರ್ಗ ಸೇರಿದಂತೆ ಕೆಲವು ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಐಎಸ್‌ಬಿಟಿ ಕಾಶ್ಮೀರಿ ಗೇಟ್‌ನಿಂದ ತಿಮಾರ್‌ಪುರ ಮತ್ತು ಸಿವಿಲ್‌ ಲೈನ್‌ಗಳವರೆಗೆ (ಮಾಲ್‌ ರಸ್ತೆ ಬದಿ) ರಿಂಗ್‌ ರೋಡ್‌ಗಳನ್ನು ಸಹ ತೆರೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರಾಯ್‌ ಕಾಲೇ ಖಾನ್‌ನಿಂದ ಐಪಿ ಫ್ಲೈಓವರ್‌, ಅಲ್ಲಿಂದ ರಾಜ್‌ಘಾಟ್‌ವರೆಗಿನ ರಿಂಗ್‌ ರೋಡ್‌ ಮಾರ್ಗವನ್ನು ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಆದರೆ, ಶಾಂತಿ ವನದಿಂದ ಮಂಕಿ ಬ್ರಿಡ್ಜ್‌ ಮತ್ತು ಯಮುನಾ ಬಜಾರ್‌–ಐಎಸ್‌ಬಿಟಿವರೆಗಿನ ರಿಂಗ್‌ ರೋಡ್‌ ಮಾರ್ಗವನ್ನು ಇನ್ನೂ ಮುಚ್ಚಲಾಗಿದೆ. 'ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮಜ್ನು ಕಾ ತಿಲಾದಿಂದ ಹನುಮಾನ್‌ ಸೇತುವರೆಗಿನ ರಿಂಗ್‌ ರೋಡ್‌ ಮಾರ್ಗ, ಐಪಿ ಕಾಲೇಜ್‌ನಿಂದ ಚಂದಗಿರಾಮ್‌ ಅಖಾರಾವರೆಗಿನ ಸರ್ವಿಸ್‌ ರಸ್ತೆಗಳು ಮತ್ತು ಚಂದಗಿರಾಮ್ ಅಖಾರಾದಿಂದ ಶಾಂತಿ ವನವರೆಗಿನ ಸರ್ವಿಸ್‌ ರಸ್ತೆಗಳನ್ನು ಇನ್ನೂ ತೆರೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹನುಮಾನ್‌ ಸೇತುವಿನಿಂದ ಸಲೀಂ ಗಢ ಬೈಪಾಸ್‌ವರೆಗೆ, ಅಲ್ಲಿಂದ ಐಪಿ ಫ್ಲೈಓವರ್‌ವರೆಗೆ ಒಂದು ಸರ್ವಿಸ್‌ ರಸ್ತೆಯನ್ನು ತೆರೆಯಲಾಗಿದೆ. ನಿಜಾಮುದ್ದೀನ್‌ಗೆ ಹೋಗುವ ಪ್ರಯಾಣಿಕರು ಈ ರಸ್ತೆಯನ್ನು ಬಳಸಬಹುದು ಹಾಗೂ ಐಪಿ ಫ್ಲೈಓವರ್‌ನಿಂದ ವಿಕಾಸ್‌ ಮಾರ್ಗಕ್ಕೆ ಅಕ್ಷರಧಾಮ ಸೇತು ಲೂಪ್‌ ಮೂಲಕ ಎಡ ತಿರುವು ತೆಗೆದುಕೊಳ್ಳಬಹುದು ಎಂದು ಟ್ರಾಫಿಕ್‌ ಪೊಲೀಸರು ಹೇಳಿದ್ದಾರೆ.

ಹೊರ ವರ್ತುಲ ರಸ್ತೆಯ ಮುಕರ್ಬಾದಿಂದ ವಜೀರಾಬಾದ್‌ವರೆಗಿನ ಎರಡೂ ಮಾರ್ಗಗಳನ್ನು ತೆರೆಯಲಾಗಿದೆ. ಐಎಸ್‌ಬಿಟಿ ಕಾಶ್ಮೀರಿ ಗೇಟ್‌ ಮುಚ್ಚಿರುವುದರಿಂದ, ಪುಷ್ಟಾದಿಂದ ಶಂಶಾನ್‌ ಘಾಟ್‌ಗೆ ಹೋಗಲು ಹಳೆಯ ಕಬ್ಬಿಣದ ಸೇತುವೆಯನ್ನು ತೆರೆಯಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

‘ಸಿಂಘು, ಟಿಕ್ರಿ, ರಾಜೋಕಾರಿ, ಬದರ್‌ಪುರ್‌, ಚಿಲ್ಲಾ, ಗಾಜಿಪುರ, ಲೋನಿ, ಅಪ್ಸರಾ ಮತ್ತು ಭೋಪುರ ಸೇರಿದಂತೆ ದೆಹಲಿಯ ವಿವಿಧ ಗಡಿಗಳಲ್ಲಿ ಭಾರಿ ಸರಕು ವಾಹನಗಳ ಪ್ರವೇಶವನ್ನು ನಿಷೇಧಿಲಾಗಿದೆ. ಅಗತ್ಯ ಸರಕುಗಳು ಮತ್ತು ಪರಿಹಾರ ಸಾಮಾಗ್ರಿಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ನಿರ್ಬಂಧಗಳಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೂ, ತಗ್ಗು ಪ್ರದೇಶಗಳಲ್ಲಿ ಪ್ರಯಾಣ ಮಾಡದಂತೆ ದೆಹಲಿ ಟ್ರಾಫಿಕ್‌ ಪೊಲೀಸರು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.