ADVERTISEMENT

ಒಡಿಶಾದಿಂದ ದೆಹಲಿಗೆ ಏರ್‌ಲಿಫ್ಟ್‌ ಆಗಲಿದೆ ಆಮ್ಲಜನಕ ಸಂಗ್ರಹ: ಕೇಜ್ರಿವಾಲ್‌

ಪಿಟಿಐ
Published 22 ಏಪ್ರಿಲ್ 2021, 10:09 IST
Last Updated 22 ಏಪ್ರಿಲ್ 2021, 10:09 IST
ದೆಹಲಿಯಲ್ಲಿ ವೈದ್ಯಕೀಯ ಆಮ್ಲಜನಕ ತುಂಬಿಸಿಕೊಳ್ಳಲು ಸಿಲಿಂಡರ್‌ ಹಿಡಿದು ನಿಂತಿರುವುದು–ಸಾಂದರ್ಭಿಕ ಚಿತ್ರ
ದೆಹಲಿಯಲ್ಲಿ ವೈದ್ಯಕೀಯ ಆಮ್ಲಜನಕ ತುಂಬಿಸಿಕೊಳ್ಳಲು ಸಿಲಿಂಡರ್‌ ಹಿಡಿದು ನಿಂತಿರುವುದು–ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಕೊರತೆ ಉಂಟಾಗಿದೆ. ಒಡಿಶಾದಿಂದ ಆಮ್ಲಜನಕ ಸಂಗ್ರಹವನ್ನು ವಾಯು ಮಾರ್ಗದಲ್ಲಿ (ಏರ್‌ಲಿಫ್ಟ್‌ ) ತರುವ ಪ್ರಯತ್ನ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ.

ದೆಹಲಿಗೆ ಹೆಚ್ಚಿನ ಪ್ರಮಾಣದಲ್ಲಿ ಒಡಿಶಾದಿಂದ ಆಮ್ಲಜನಕ ಪೂರೈಕೆಯಾಗಲಿದ್ದು, ರಾಜ್ಯಗಳ ನಡುವೆ ನೂರಾರು ಕಿಲೋ ಮೀಟರ್‌ ಅಂತರವಿದೆ. ಕೊರೊನಾ ವೈರಸ್‌ ವಿರುದ್ಧದ ಹೋರಾಟದ ತುರ್ತು ಪರಿಸ್ಥಿತಿಯಲ್ಲಿ ಸಮಯದ ಉಳಿತಾಯಕ್ಕಾಗಿ ಆಮ್ಲಜನಕ ಸಂಗ್ರಹವನ್ನು ಏರ್‌ಲಿಫ್ಟ್‌ ಮಾಡಲು ನಿರ್ಧರಿಸಿರುವುದಾಗಿ ಕೇಜ್ರಿವಾಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏರ್‌ಲಿಫ್ಟ್ ಮಾಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಭರವಸೆ ನೀಡಿದ್ದಾರೆ. ಅದಕ್ಕಾಗಿ ಒಡಿಶಾ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಿಸಿರುವುದಾಗಿ ಕೇಜ್ರಿವಾಲ್‌ ಟ್ವೀಟಿಸಿದ್ದಾರೆ.

ADVERTISEMENT

ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ದೆಹಲಿಗೆ ಮೀಸಲಿಟ್ಟಿರುವ ಆಮ್ಲಜನಕ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಸಹಕಾರ ನೀಡಿದ ಕೇಂದ್ರ ಸರ್ಕಾರ ಮತ್ತು ಹೈಕೋರ್ಟ್‌ಗೆ ಕೇಜ್ರಿವಾಲ್‌ ಧನ್ಯವಾದ ಅರ್ಪಿಸಿದ್ದಾರೆ. ಆಮ್ಲಜನಕ ಸಂಗ್ರಹ ರಾಷ್ಟ್ರರಾಜಧಾನಿಯನ್ನು ತಲುಪುತ್ತಿರುವುದಾಗಿ ತಿಳಿಸಿದ್ದಾರೆ.

ವೈದ್ಯಕೀಯ ಬಳಕೆಗಾಗಿ ಆಮ್ಲಜನಕ ಹೊತ್ತು ಬರುತ್ತಿರುವ ವಾಹನಗಳ ಅಡಚಣೆ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಹರಿಯಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ದೆಹಲಿಗೆ ನಿಗದಿಗೊಳಿಸಲಾಗಿದ್ದ 378 ಮೆಟ್ರಿಕ್‌ ಟನ್‌ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು 480 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸಲಾಗಿದೆ. ಆದರೆ, ದೆಹಲಿಗೆ ನಿತ್ಯ ಅಂದಾಜು 700 ಮೆಟ್ರಿಕ್‌ ಟನ್‌ಗಳಷ್ಟು ಆಮ್ಲಜನಕ ಅಗತ್ಯವಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.