ನವದೆಹಲಿ: ಕೋವಿಡ್–19 ಸೋಂಕು ಇದೀಗ ಸಮುದಾಯದಲ್ಲಿ ಹರಡಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೋಮವಾರ ಹೇಳಿದ್ದಾರೆ.
‘ಸೋಂಕು ಸಮುದಾಯದ ಮೂಲಕ ಹರಡಿದೆ. ಇದು ಸ್ಥಳೀಯವಾಗಿ ಹರುಡುತ್ತಿದೆಯೇ ಅಥವಾ ಸಮುದಾಯದಲ್ಲಿ ಹರಡುತ್ತಿದೆಯೋ ಎಂಬುದನ್ನು ಹೇಳಲು ತುಂಬಾ ತಾಂತ್ರಿಕವಾದ ಅಂಶವಾಗಿದೆ. ಸೋಂಕು ಇರುವುದು ಖಚಿತವಾದ ಹಲವರಮೂಲ ಪರೀಕ್ಷೆ ನಡೆಸಿದನಂತರವೂ ಗೊತ್ತಾಗುತ್ತಿಲ್ಲ. ಸೋಂಕು ಸಮುದಾಯದಲ್ಲಿ ಹರಡುತ್ತಿದೆ ಎಂಬುದನ್ನು ನಿರ್ಧರಿಸುವ ತಾಂತ್ರಿಕ ಸಂಘರ್ಷವನ್ನು ಕೇಂದ್ರ ಸರ್ಕಾರಕ್ಕೇ ಬಿಡೋಣ’ ಎಂದು ತಿಳಿಸಿದ್ದಾರೆ.
ಜೈನ್ ಅವರಿಗೆ ಕಳೆದ ತಿಂಗಳು ಕೋವಿಡ್–19 ಇರುವುದು ದೃಢಪಟ್ಟಿತ್ತು. ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ದಕ್ಷಿಣ ದೆಹಲಿಯಲ್ಲಿರುವ ಸಾಕೆತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿತ್ತು.
ಇದೀಗ ಚೇತರಿಸಿಕೊಂಡಿರುವ ಅವರು ಇಂದಿನಿಂದ ಕೆಲಸಕ್ಕೆ ಮರಳಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಕೇಜ್ರಿವಾಲ್, ‘ನಮ್ಮ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಚೇತರಿಸಿಕೊಂಡಿದ್ದಾರೆ. ಅವರು ಇಂದಿನಿಂದ ಕೆಲಸಕ್ಕೆ ಮರಳಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
‘ಅವರು (ಜೈನ್) ನಿರಂತರವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದರು. ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳನ್ನು ಭೇಟಿಯಾಗುತ್ತಿದ್ದರು. ಅವರಿಗೂ ಸೋಂಕು ಕಾಣಿಸಿಕೊಂಡಿತ್ತು. ಒಂದು ತಿಂಗಳ ನಂತರ ಅವರು ಮತ್ತೆ ನಮ್ಮೊಡನೆ ಸೇರಿಕೊಂಡಿದ್ದಾರೆ’ ಎಂದೂ ತಿಳಿಸಿದ್ದಾರೆ.
ದೆಹಲಿಯಲ್ಲಿ ಇದುವರೆಗೆ ಒಟ್ಟು 1,22,793 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಲ್ಲಿ 1,03,134 ಮಂದಿ ಗುಣಮುಖರಾಗಿದ್ದಾರೆ. 3,628 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.