ADVERTISEMENT

ದೆಹಲಿ ಹಿಂಸಾಚಾರ: ಸಂಸತ್‌ನಲ್ಲಿ ನಿಲ್ಲದ ಪ್ರತಿಭಟನೆ

ಅಶಿಸ್ತು ಪ್ರದರ್ಶನ; ಪರಿಶೀಲನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 1:27 IST
Last Updated 7 ಮಾರ್ಚ್ 2020, 1:27 IST
   

ನವದೆಹಲಿ: ದೆಹಲಿ ಹಿಂಸಾಚಾರ ಕುರಿತು ಸಮಗ್ರ ಚರ್ಚೆ ಹಾಗೂ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದವು. ಇದರಿಂದಾಗಿ ಸಂಸತ್‌ನ ಉಭಯ ಸದನಗಳ ಕಲಾಪ ಶುಕ್ರವಾರವೂ ನಡೆಯಲಿಲ್ಲ.

ರಾಜ್ಯಸಭೆಯ ಕಲಾಪವು ಚರ್ಚೆಗೆ ಅವಕಾಶ ದೊರೆಯದೆ ಮುಂದಕ್ಕೆ ಹೋದರೆ, ಲೋಕಸಭೆಯಲ್ಲಿ ದಿನದ ಕಲಾಪ ಆರಂಭ ಆಗುತ್ತಿದ್ದಂತೆಯೇ ಪ್ರತಿಭಟನೆ ಮುಂದುವರಿಸಿದ ಕಾಂಗ್ರೆಸ್‌, ತಮ್ಮ ಪಕ್ಷದ ಏಳು ಸದಸ್ಯರು ಅಮಾನತುಗೊಳಿಸಿರುವುದನ್ನು ಖಂಡಿಸಿದರು.

‘ಜೇಬು ಕಳ್ಳತನದಂತಹ ಸಣ್ಣ ಪ್ರಮಾಣದ ಅಪರಾಧ ಎಸಗಿದವರಿಗೂ ಗಲ್ಲು ಶಿಕ್ಷೆ ವಿಧಿಸುವುದು ಸರಿಯಲ್ಲ’ ಎಂಬ ಕಾಂಗ್ರೆಸ್ ಗುಂಪಿನ ನಾಯಕ ಅಧೀರ್‌ ರಂಜನ್‌ ಚೌಧರಿ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಎನ್‌ಸಿಪಿಯ ಸುಪ್ರಿಯಾ ಸುಳೆ, ಟಿಎಂಸಿಯ ಸುದೀಪ್‌ ಚಟ್ಟೋಪಾಧ್ಯಾಯ, ಡಿಎಂಕೆಯ ದಯಾನಿಧಿ ಮಾರನ್‌, ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಕೋರಿದರು.

ADVERTISEMENT

ವಿರೋಧ ಪಕ್ಷಗಳ ಈ ನಿಲುವಿಗೆ ಆಡಳಿತಾರೂಢ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಮಿತಿ ರಚನೆ
ಬಜೆಟ್‌ ಅಧಿವೇಶನದ ದ್ವಿತೀಯ ಹಂತದ ಕಲಾಪ ಆರಂಭವಾದ ಮಾರ್ಚ್ 2ರಿಂದ 5ರವರೆಗೆ ಲೋಕಸಭೆಯಲ್ಲಿ ನಡೆದ ಧರಣಿಯ ವೇಳೆ ವಿರೋಧ ಪಕ್ಷಗಳ ಸದಸ್ಯರು ಅಶಿಸ್ತು ಪ್ರದರ್ಶಿಸಿದ್ದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ಪೀಕರ್‌ ಓಂ ಬಿರ್ಲಾ ನೇತೃತ್ವದಲ್ಲಿ ಸರ್ವ ಪಕ್ಷಗಳ ಸದಸ್ಯರ ಸಮಿತಿ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.