ADVERTISEMENT

ಸುನಂದಾ ಸಾವಿನ ಪ್ರಕರಣ: ಹೈಕೋರ್ಟ್‌ನಲ್ಲಿ ತರೂರ್‌ ಖುಲಾಸೆ ಪ್ರಶ್ನಿಸಿದ ಪೊಲೀಸರು

ಪಿಟಿಐ
Published 1 ಡಿಸೆಂಬರ್ 2022, 12:49 IST
Last Updated 1 ಡಿಸೆಂಬರ್ 2022, 12:49 IST
ಶಶಿ ತರೂರ್‌ 
ಶಶಿ ತರೂರ್‌    

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪತ್ನಿ ಸುನಂದಾ‍ಪುಷ್ಕರ್‌ ನಿಗೂಢ ಸಾವಿನ ಪ್ರಕರಣದಿಂದ ತರೂರ್‌ ಅವರನ್ನು ದೋಷಮುಕ್ತಗೊಳಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಇಲ್ಲಿನ ಪೊಲೀಸರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ದೆಹಲಿ ಪೊಲೀಸರು ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಶರ್ಮಾ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ತರೂರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ದೆಹಲಿ‍ಪೊಲೀಸರು ತಮಗೆ ನೀಡಿಲ್ಲ. ಅದನ್ನು ಉದ್ದೇಶಪೂರ್ವಕವಾಗಿಯೇ ತಪ್ಪಾದ ಇ–ಮೇಲ್‌ ವಿಳಾಸಕ್ಕೆ ರವಾನಿಸಲಾಗಿದೆ ಎಂದು ತರೂರ್‌‍ಪರ ವಕೀಲರು ಆರೋಪಿಸಿದರು.

ADVERTISEMENT

ಇದನ್ನು ಆಲಿಸಿದ ನ್ಯಾಯಪೀಠವು ಅರ್ಜಿಯ ಪ್ರತಿಯನ್ನು ತರೂರ್‌ ಪ‍ರ ವಕೀಲರಿಗೆ ನೀಡುವಂತೆ ದೆಹಲಿ ಪೊಲೀಸರ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರಿಗೆ ಸೂಚಿಸಿತು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಉಭಯ ಬಣದವರನ್ನು ಬಿಟ್ಟು ಇನ್ನಾರಿಗೂ ಒದಗಿಸಬಾರದು ಎಂದೂ ನ್ಯಾಯಪೀಠ ನಿರ್ದೇಶಿಸಿತು. ಪ್ರಕರಣದ ವಿಚಾರಣೆಯನ್ನು 2023ರ ಫೆಬ್ರುವರಿ 7ಕ್ಕೆ ಮುಂದೂಡಿತು.

2014ರ ಜನವರಿಯಲ್ಲಿ ಸುನಂದಾ ಅವರು ನವದೆಹಲಿಯ ಹೋಟೆಲ್‌ವೊಂದರಲ್ಲಿ ಮೃತಪಟ್ಟಿದ್ದರು. ಕ್ರೌರ್ಯ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪೊಲೀಸರು ತರೂರ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಅವರನ್ನು ಬಂಧಿಸಿರಲಿಲ್ಲ. 2021ರ ಆಗಸ್ಟ್‌ 18ರಂದು ವಿಚಾರಣಾಧೀನ ನ್ಯಾಯಾಲಯವು ತರೂರ್‌ ಅವರನ್ನು ದೋಷಮುಕ್ತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.