ನಗದು
(ಐಸ್ಟೋಕ್ ಚಿತ್ರ)
ನವದೆಹಲಿ: 'ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗುವ ಮುನ್ನವೇ ಸಂಚು ರೂಪಿಸಿರುವ ಬಿಜೆಪಿ, ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಅಭ್ಯರ್ಥಿಗಳಿಗೆ ತಲಾ ₹15 ಕೋಟಿ ಆಮಿಷ ಒಡ್ಡಿದೆ' ಎಂದು ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಇಂದು (ಗುರುವಾರ) ಆರೋಪಿಸಿದ್ದಾರೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಗಂಭೀರ ಆರೋಪ ಮಾಡಿರುವ ಸಂಜಯ್ ಸಿಂಗ್, 'ಎಎಪಿಯ ಏಳು ಶಾಸಕರಿಗೆ ಕರೆ ಮಾಡಲಾಗಿದ್ದು, ಪಕ್ಷಾಂತರಗೊಂಡು ಬಿಜೆಪಿಗೆ ಸೇರಲು ತಲಾ ₹15 ಕೋಟಿ ಆಮಿಷ ಒಡ್ಡಲಾಗಿದೆ' ಎಂದು ಹೇಳಿದ್ದಾರೆ.
'ಚುನಾವಣೆಯ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ ಎಂಬುದು ಇದರಿಂದಲೇ ಸಾಬೀತುಗೊಂಡಿದೆ. ಅದಕ್ಕಾಗಿಯೇ ಈ ರೀತಿಯಾಗಿ ಹಿಂಬಾಗಿಲಿನಿಂದ ಪ್ರಯತ್ನ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.
'ಬಿಜೆಪಿಯ ಕರೆಗಳನ್ನು ರೆಕಾರ್ಡ್ ಮಾಡುವಂತೆ ಮತ್ತು ಮುಖಾಮುಖಿ ಭೇಟಿಯಾದರೆ ರಹಸ್ಯ ಕ್ಯಾಮೆರಾಗಳನ್ನು ಸ್ಥಾಪಿಸುವಂತೆ ಪಕ್ಷದ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ' ಎಂದು ಅವರು ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಮತದಾನ ನಡೆದಿತ್ತು. ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.