ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಪುನರ್ರಚನೆಗಾಗಿ ರಕ್ಷಣಾ ಸಚಿವಾಲಯ ರಚಿಸಿರುವ 15 ಸದಸ್ಯರಿರುವ ಸಮಿತಿಯಲ್ಲಿ ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ, ಉದ್ಯಮಿ ಆನಂದ್ ಮಹೀಂದ್ರ ಅವರಿಗೆ ಸ್ಥಾನ ನೀಡಲಾಗಿದೆ.
ಧೋನಿ ಅವರು ಭಾರತೀಯಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ.
ಎನ್ಸಿಸಿಯನ್ನು ಹೆಚ್ಚು ಪ್ರಸ್ತುತವಾಗಬೇಕು. ಈ ಸಂಬಂಧ ಅದರ ಪುನರ್ರಚನೆಗಾಗಿ ರಚಿಸಲಾದ ಸಮಿತಿಯ ಅಧ್ಯಕ್ಷರನ್ನಾಗಿ ಮಾಜಿ ಸಂಸದ ಬೈಜಯಂತ್ ಪಾಂಡ ಅವರನ್ನು ನೇಮಕ ಮಾಡಲಾಗಿದೆ.
ನಿವೃತ್ತ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಠೋಡ್, ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ಧೆ, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್, ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಕುಲಪತಿ ನಜ್ಮಾ ಅಖ್ತರ್, ಎಸ್ಎನ್ಡಿಟಿ ಮಹಿಳಾ ವಿ.ವಿಯ ಮಾಜಿ ಕುಲಪತಿ ವಸುಧಾ ಕಾಮತ್, ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕಾನಿಟ್ಕರ್, ಮೇಜರ್ ಜನರಲ್ (ನಿವೃತ್ತ) ಅಲೋಕ್ ರಾಜ್, ಎಸ್ಐಎಸ್ ಇಂಡಿಯಾ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರಿತುರಾಜ್ ಸಿನ್ಹ, ಡಾಟಾಬುಕ್ ಕಂಪನಿಯ ಸಿಇಒ ಆನಂದ್ ಶಾ ಅವರು ಸಮಿತಿಯ ಸದಸ್ಯರಾಗಿದ್ದಾರೆ.
‘ಅಂತರರಾಷ್ಟ್ರೀಯ ಯುವ ಸಂಘಟನೆಗಳಲ್ಲಿ ಪಾಲಿಸಲಾಗುತ್ತಿರುವ ನೀತಿಗಳನ್ನು ಸಮಿತಿ ಅಧ್ಯಯನ ಮಾಡಲಿದೆ. ಎನ್ಸಿಸಿ ಪಠ್ಯಕ್ರಮದಲ್ಲಿ ಅಳವಡಿಸುವ ಅಂಶಗಳ ಕುರಿತು ಸಮಿತಿ ಶಿಫಾರಸು ಮಾಡುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸುವುದು ಹಾಗೂ ನಿಸ್ವಾರ್ಥ ಸೇವೆ, ಜಾತ್ಯತೀತ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಮಾಡುವ ಎನ್ಸಿಸಿಯನ್ನು 1948ರಲ್ಲಿ ಸ್ಥಾಪಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.