ADVERTISEMENT

ಕುಂಭ ಮೇಳದಲ್ಲಿ ಶಾಹಿ ಸ್ನಾನ; ಪರಸ್ಪರ ಅಂತರ ಅಸಾಧ್ಯ, ಪ್ರಯತ್ನಿಸಿದರೆ ಕಾಲ್ತುಳಿತ!

ಏಜೆನ್ಸೀಸ್
Published 12 ಏಪ್ರಿಲ್ 2021, 5:10 IST
Last Updated 12 ಏಪ್ರಿಲ್ 2021, 5:10 IST
ಹರಿದ್ವಾರದ ಕುಂಭ ಮೇಳ, ಹರ್‌ ಕಿ ಪೌಡಿ ಘಾಟ್‌ನಲ್ಲಿ ಗಂಗಾರತಿ ಮಾಡುತ್ತಿರುವುದು
ಹರಿದ್ವಾರದ ಕುಂಭ ಮೇಳ, ಹರ್‌ ಕಿ ಪೌಡಿ ಘಾಟ್‌ನಲ್ಲಿ ಗಂಗಾರತಿ ಮಾಡುತ್ತಿರುವುದು   

ಹರಿದ್ವಾರ (ಉತ್ತರಾಖಂಡ): ಕುಂಭ ಮೇಳದ ಪವಿತ್ರ ಎರಡನೇ `ಶಾಹಿ ಸ್ನಾನ'ದ (13 ಅಖಾಡಗಳ ಸಾಧು ಸಂತರಿಂದ ಪುಣ್ಯ ಸ್ನಾನ) ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಕಠಿಣವಾಗಿದೆ ಎಂದು ಕುಂಭ ಮೇಳದ ಐಜಿ ಸಂಜಯ್‌ ಗುಂಜ್ಯಾಲ್‌ ಹೇಳಿದ್ದಾರೆ.

ಉತ್ತರಾಖಂಡ ಹರಿದ್ವಾರದ ಹರ್‌ ಕಿ ಪೌಡಿಯ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಿಲ್ಲ.

'ಕೋವಿಡ್–19 ತಡೆಗೆ ಅಗತ್ಯ ನಿಯಮಗಳನ್ನು ಅನುಸರಿಸುವಂತೆ ಜನರಿಗೆ ನಿರಂತರವಾಗಿ ತಿಳಿಸಲಾಗುತ್ತಿದೆ. ಆದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರಿರುವುದರಿಂದ ಚಲನ್ ನೀಡುವುದು ಅಸಾಧ್ಯವಾಗಿದೆ. ಘಾಟ್‌ಗಳಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಕಷ್ಟಕರವಾಗಿದೆ' ಎಂದು ಸಂಜಯ್‌ ತಿಳಿಸಿದ್ದಾರೆ.

ADVERTISEMENT

ಜನರ ನಡುವೆ ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಘಾಟ್‌ಗಳ ಬಳಿ ಕಠಿಣವಾಗಿ ಜಾರಿಗೊಳಿಸುವುದು ಸಾಧ್ಯವಾಗುವುದಿಲ್ಲ, ಆ ರೀತಿಯ ಪ್ರಯತ್ನ ಮಾಡಿದರೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಕ್ತಾದಿಗಳು ಸೋಮವಾರ ಹರ್‌ ಕಿ ಪೌಡಿಯಲ್ಲಿ ಪವಿತ್ರ ಗಂಗಾ ನದಿಯಲ್ಲಿ ಎರಡನೇ ಶಾಹಿ ಸ್ನಾನ ಮಾಡಿದರು. ಬೆಳಿಗ್ಗೆ 7ರ ವರೆಗೂ ಸಾರ್ವಜನಿಕರಿಗೆ ಶಾಹಿ ಸ್ನಾನಕ್ಕೆ ಅವಕಾಶ ನೀಡಲಾಯಿತು, ಅನಂತರ ಘಾಟ್‌ ವಲಯವನ್ನು 'ಅಖಾಡಗಳಿಗೆ' ಮೀಸಲಿಡಲಾಗಿದೆ.

ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್‌ 11ರಂದು ಮೊದಲ ಶಾಹಿ ಸ್ನಾನ ನೆರವೇರಿತ್ತು. ಎರಡನೇ ಪವಿತ್ರ ಸ್ನಾನವು ಇವತ್ತು ಹಾಗೂ ಮೂರನೇ ಪವಿತ್ರ ಸ್ನಾನವು ಏಪ್ರಿಲ್‌ 14ರಂದು ನಡೆಯಲಿದೆ, 13 ಅಖಾಡಗಳ ಸಾಧುಗಳು ಗಂಗಾ ನದಿಯಲ್ಲಿ ಮಿಂದೇಳಲಿದ್ದಾರೆ.

ಉತ್ತರಾಖಂಡದಲ್ಲಿ ಭಾನುವಾರ ಕೋವಿಡ್‌–19 ದೃಢಪಟ್ಟ 1,333 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,08,812ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 7,323 ಪ್ರಕರಣಗಳು ಸಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.