ADVERTISEMENT

ಡಿಜಿಟಲ್‌ ಅರೆಸ್ಟ್‌: ಮುಂಬೈನ ಉದ್ಯಮಿ ಬಳಿ ₹58 ಕೋಟಿ ಲೂಟಿ

ಪಿಟಿಐ
Published 16 ಅಕ್ಟೋಬರ್ 2025, 13:19 IST
Last Updated 16 ಅಕ್ಟೋಬರ್ 2025, 13:19 IST
<div class="paragraphs"><p> ವಂಚನೆ</p></div>

ವಂಚನೆ

   

ಮುಂಬೈ: ಮುಂಬೈನ 72 ವರ್ಷದ ಉದ್ಯಮಿ ಮತ್ತು ಅವರ ಪತ್ನಿಯನ್ನು 52 ದಿನಗಳವರೆಗೆ ‘ಡಿಜಿಟಲ್‌ ಅರೆಸ್ಟ್’ ಹೆಸರಿನಲ್ಲಿ ಬೆದರಿಸಿ ಸುಮಾರು ₹58 ಕೋಟಿ ಮೊತ್ತವನ್ನು ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿನ ಒಟ್ಟು 18 ಬ್ಯಾಂಕ್‌ ಖಾತೆಗಳಿಗೆ ಮೂವರು ಆರೋಪಿಗಳು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಬೆದರಿಸಿ ಇಷ್ಟು ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡಿಸಿಕೊಂಡಿದ್ದು ದೇಶದಲ್ಲಿ ಇದೇ ಮೊದಲ ಬಾರಿಯಾಗಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಸಿಬಿಐ ಅಧಿಕಾರಿಗಳು ಎಂದು ಬಿಂಬಿಸಿಕೊಂಡು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದರು. 

ADVERTISEMENT

‘ಪ್ರಕರಣ ಸಂಬಂಧ ಮಲಾಡ್‌ನ ಅಬ್ದುಲ್‌ ಕುಲ್ಲಿ (47), ಮಲಾಡ್‌ ಉಪನಗರದ ಅರ್ಜುನ್‌ ಕಡ್ವಾಸರ (55) ಮತ್ತು ಈತನ ಸಹೋದರ, ಮುಂಬೈ ಸೆಂಟ್ರಲ್‌ನ ಜೀತರಾಮ್‌ (35) ಅವರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಸೈಬರ್‌ ಇಲಾಖೆಯು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ’ ಎಂದರು.

ಸಂತ್ರಸ್ತ ದಂಪತಿಯ ಖಾತೆಗಳಿಂದ ಹಣ ವರ್ಗಾಯಿಸಿಕೊಂಡ ಖಾತೆಗಳನ್ನು ಸ್ಥಗಿತ ಮಾಡುವಂತೆ ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಎರಡು ತಿಂಗಳು ಅರೆಸ್ಟ್‌

ಇ.ಡಿ. ಮತ್ತು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ಮೂವರು ಆರೋಪಿಗಳು ಉದ್ಯಮಿ ದಂಪತಿಗೆ ಆಗಸ್ಟ್‌ 19ರಂದು ಮೊದಲ ಬಾರಿಗೆ ಕರೆ ಮಾಡಿದ್ದಾರೆ. ‘ನಿಮ್ಮ ಬ್ಯಾಂಕ್‌ ಖಾತೆಗಳಲ್ಲಿ ಅಕ್ರಮವಾಗಿ ಹಣ ಇಟ್ಟುಕೊಂಡಿದ್ದೀರಿ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಿಮ್ಮ ಹೆಸರು ಸೇರಿಕೊಂಡಿದೆ. ಆದ್ದರಿಂದ ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡುತ್ತಿದ್ದೇವೆ’ ಎಂದು ಆರೋಪಿಗಳು ಬೆದರಿಸಿದ್ದರು.

ತಾವು ನಿಜವಾಗಿಯೂ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳೇ ಹೌದು ಎಂದು ದಂಪತಿಯನ್ನು ನಂಬಿಸುವುದಕ್ಕೆ ಕೆಲವು ನಕಲಿ ದಾಖಲೆಗಳನ್ನೂ ನೀಡಿದ್ದಾರೆ. ವಿಡಿಯೊ ಕರೆ ಮಾಡುವುದರ ಮೂಲಕ ಆರೋಪಿಗಳು ದಂಪತಿಯನ್ನು ‘ಡಿಜಿಟಲ್‌ ಅರೆಸ್ಟ್’ ಹೆಸರಿನಲ್ಲಿ ವಂಚಿಸಿದ್ದರು.

‘ನಿಮ್ಮ ಬಳಿ ಇರುವುದು ಅಕ್ರಮ ಹಣವೇ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸಬೇಕು. ಆದ್ದರಿಂದ ಸ್ಪಲ್ಪ ಮೊತ್ತವನ್ನು ನಾವು ಹೇಳಿದ ಖಾತೆಗೆ ವರ್ಗಾಯಿಸಿ. ಪರಿಶೀಲನೆ ಬಳಿಕ ನಿಮ್ಮ ಹಣವನ್ನು ವಾಪಸು ನೀಡುತ್ತೇವೆ’ ಎಂದು ಆರೋಪಿಗಳು ಹೇಳಿದ್ದಾರೆ. ಇದರಿಂದ ಬೆದರಿದ ದಂಪತಿ ಹಣ ವರ್ಗಾಯಿಸಿದ್ದಾರೆ. ಈ ಸುಮಾರು ಎರಡು ತಿಂಗಳಲ್ಲಿ ದಂಪತಿಯು ಕಂತು ಕಂತಾಗಿ ₹58 ಕೋಟಿ ವರ್ಗಾಯಿಸಿದ್ದಾರೆ. ಈ ಎಲ್ಲದರ ಬಳಿಕ ದಂಪತಿಗೆ ತಾವು ಮೋಸ ಹೋಗಿರುವುದಾಗಿ ಅನುಮಾನ ಬಂದು ಮಹಾರಾಷ್ಟ್ರ ಸೈಬರ್‌ ವಿಭಾಗದ ಪೊಲೀಸರಿಗೆ ಕಳೆದ ವಾರ ದೂರು ನೀಡಿದ್ದಾರೆ.

ಸರ್ಕಾರಿ ಅಧಿಕಾರಿಗಳು ಎಂದು ಹೇಳಿಕೊಂಡು ಹಣಕ್ಕಾಗಿ ಜನರಿಗೆ ಮೋಸ ಮಾಡುವ ಇಂಥ ಕೃತ್ಯಗಳು ದೇಶದಲ್ಲಿ ಹೆಚ್ಚಾಗುತ್ತಿವೆ.
-ಮಹಾರಾಷ್ಟ್ರ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.