ADVERTISEMENT

ವಿರೋಧಿಸುವುದು ದೇಶದ್ರೋಹವಲ್ಲ, ಜನರಿಗೆ ಟೀಕಿಸುವ ಹಕ್ಕು ಇದೆ: ಕಾನೂನು ಆಯೋಗ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 15:21 IST
Last Updated 1 ಸೆಪ್ಟೆಂಬರ್ 2018, 15:21 IST
   

ನವದೆಹಲಿ: ದೇಶವನ್ನು ಅಥವಾ ನಿರ್ದಿಷ್ಟ ವಿಚಾರವನ್ನು ಕುರಿತು ಟೀಕಿಸುವುದು ದೇಶದ್ರೋಹವಲ್ಲ. ಅಕ್ರಮ ಅಥವಾ ಗಲಭೆಗಳನ್ನು ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳನ್ನು ಮಾತ್ರವೇ ದೇಶದ್ರೋಹ ಎನ್ನಬಹುದು ಎಂದು ಕಾನೂನು ಆಯೋಗಸಲಹಾ ಪತ್ರದಲ್ಲಿ ಹೇಳಿದೆ.

ನಿವೃತ್ತ ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್‌ ನೇತೃತ್ವದ ಆಯೋಗವು, ಬೃಹತ್‌ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಂತಹ ದೇಶಗಳಲ್ಲಿ ‘ದೇಶದ್ರೋಹ’ವನ್ನು ಮರು ವ್ಯಾಖ್ಯಾನಿಸಬೇಕಾದ ಅಗತ್ಯವಿದೆ.ಜೊತೆಗೆ ಭಾರತೀಯ ದಂಡ ಸಂಹಿತೆಯಲ್ಲಿನ 124ಎ(ದೇಶದ್ರೋಹಕ್ಕೆ ಸಂಬಂಧಿಸಿದ)ಸೆಕ್ಷನ್‌ ಅನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

‘ದೇಶವನ್ನು ಅಥವಾ ನಿರ್ದಿಷ್ಟ ವಿಚಾರವನ್ನು ಟೀಕಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಬಾರದು. ಒಂದು ವೇಳೆ ದೇಶವು ಧನಾತ್ಮಕ ಟೀಕೆಗಳಿಗೆ ಒಡ್ಡಿಕೊಳ್ಳದಿದ್ದರೆ, ಸ್ವಾತಂತ್ರ್ಯಪೂರ್ವಹಾಗೂ ಸ್ವಾತಂತ್ರೋತ್ತರ ಕಾಲಘಟ್ಟಗಳ ನಡುವಣ ವ್ಯತ್ಯಾಸವೇ ಸುಳ್ಳಾಗಲಿದೆ. ಮಾತನಾಡುವ ಸ್ವಾತಂತ್ರ್ಯದೊಡನೆ ಟೀಕಿಸುವ ಹಕ್ಕನ್ನು ಸಂವಿಧಾನದಲ್ಲಿ ನೀಡಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆಜವಾಹರ್‌ ಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು) ಆವರಣದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ್ದ ಆರೋಪದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ ವಿರುದ್ಧ ಕ್ರಮ ಕೈಗೊಂಡಿದ್ದ ಪ್ರಕರಣವನ್ನು ಉದಾಹರಣೆಯಾಗಿ ನೀಡಲಾಗಿದೆ.

ADVERTISEMENT

‘ಮಾತನಾಡುವ ಸ್ವಾತಂತ್ರ್ಯದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿದ್ದು, ಇದರ ದುರ್ಬಳಕೆ ಆಗಬಾರದು.ಭಿನ್ನಾಭಿಪ್ರಾಯಗಳು ಹಾಗೂ ಟೀಕೆಗಳು ಯೋಜನೆಗಳ ವಿಚಾರವಾಗಿ ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕುವ ಪ್ರಮುಖ ಘಟಕಗಳಾಗಿದ್ದು,ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುತ್ತವೆ. ಮಾತನಾಡುವ ಸ್ವಾತಂತ್ರ್ಯದ ಮೇಲೆ ವಿಧಿಸಲಾಗುವ ಎಲ್ಲ ನಿರ್ಬಂಧಗಳ ಕುರಿತು ಸೂಕ್ಷ್ಮವಾಗಿ ಅವಲೋಕನ ನಡೆಸಬೇಕು’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.