ADVERTISEMENT

ಸೂಪರ್‌ಸ್ಟಾರ್ ರಜನಿಕಾಂತ್‌ಗೆ 'ಒಂದು ವಿಷಯದ ಬಗ್ಗೆ ನಿರಾಶೆಯಿದೆಯಂತೆ!

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 12:10 IST
Last Updated 5 ಮಾರ್ಚ್ 2020, 12:10 IST
ಸೂಪರ್‌ಸ್ಟಾರ್ ರಜನಿಕಾಂತ್
ಸೂಪರ್‌ಸ್ಟಾರ್ ರಜನಿಕಾಂತ್   

ಚೆನ್ನೈ: ತಮ್ಮ ರಜಿನಿ ಮಕ್ಕಳ್ ಮಂದ್ರಂನ (ರಜಿನಿ ಪೀಪಲ್ಸ್ ಫೋರಂ) ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್, ಒಂದು ವಿಚಾರದ ಬಗ್ಗೆ ನಿರಾಶೆಗೊಂಡಿರುವುದಾಗಿ ಹೇಳಿದ್ದಾರೆ.

ಪಕ್ಷವನ್ನು ಘೋಷಿಸಿದ ಎರಡು ವರ್ಷಗಳ ಬಳಿಕ ಸಭೆ ನಡೆಸಿರುವ ಅವರು, ಸಭೆಯಲ್ಲಿ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಆದರೆ ವೈಯಕ್ತಿಕವಾಗಿ ಒಂದು ವಿಚಾರದ ಬಗ್ಗೆ ನನಗೆ ನಿರಾಶೆ ಉಂಟಾಗಿದೆ. ಆದರೆ ಸಮಯ ಬಂದಾಗ ಅದನ್ನು ತಿಳಿಸುತ್ತೇನೆ. ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ನಾನು ಉತ್ತಮ ಸಭೆ ನಡೆಸಿದೆ. ಅವರು ಸಹ ತೃಪ್ತರಾಗಿದ್ದಾರೆ ಎಂದು ಹೇಳಿದ್ದಾರೆ.

2021ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಧಾರ್ಮಿಕ ಮುಖಂಡರು ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದಾರೆ ಎನ್ನುವ ಹೇಳಿಕೆ ಸಂಬಂಧ ಇತ್ತೀಚೆಗಷ್ಟೇ ಮುಸ್ಲಿಂ ಧರ್ಮಗುರುಗಳು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

ADVERTISEMENT

ಮುಸ್ಲಿಂ ನಾಯಕರೊಂದಿಗೆ ಇತ್ತೀಚೆಗೆ ನಡೆದ ಸಭೆಯು ಸುಂದರವಾಗಿತ್ತು. ಅದು ಭ್ರಾತೃತ್ವ, ಪ್ರೀತಿ ಮತ್ತು ಶಾಂತಿಯ ಸಭೆಯಾಗಿತ್ತು. ಅವರು ನನ್ನ ಬೆಂಬಲವನ್ನು ಕೋರಿದರು. ಅದಕ್ಕಾಗಿ ಗೃಹ ಸಚಿವರನ್ನು ಭೇಟಿಯಾಗಿ ಮತ್ತು ನಿಮಗಿರುವ ಆತಂಕದ ಕುರಿತು ಅವರಿಗೆ ಹೇಳುವಂತೆ ತಿಳಿಸಿದೆ. ನಾನು ಕೂಡ ಅವರಿಗೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದೆ ಎಂದರು.

ತಮಿಳುನಾಡಿನ ದಿವಂಗತ ಜಯಲಲಿತಾ ಅವರಿಂದ ತೆರವಾಗಿರುವ ಸ್ಥಾನವನ್ನು ನೀವು ಮತ್ತು ಕಮಲ್ ಹಾಸನ್ ಅವರು ತುಂಬಲು ಯತ್ನಿಸುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆಲ್ಲ ಸಮಯವೇ ಉತ್ತರ ನೀಡಲಿದೆ ಎಂದು ಹೇಳಿದರು.

ಸದ್ಯ ರಜನಿಕಾಂತ್ ಅವರು ಸಿರುತೈ ಶಿವಾ ನಿರ್ದೇಶನದ 'ಅನ್ನಥೆ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ ಮತ್ತು ಮೀನಾ ನಟಿಸಿದ್ದಾರೆ. ಇದರೊಂದಿಗೆ ಕಮಲ್ ಹಾಸನ್ ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿಯೂ ಸಿನಿಮಾ ಮಾಡಲು ರಜಿನಿಕಾಂತ್ ಒಪ್ಪಿಕೊಂಡಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.