ADVERTISEMENT

ಕೇಂದ್ರೀಯ ವಿದ್ಯಾಲಯಗಳಿಗೆ ಪ್ರವೇಶ: ಸಂಸದರ ‘ವಿವೇಚನಾ ಕೋಟಾ’ಕ್ಕೆ ತಡೆ

ಪಿಟಿಐ
Published 15 ಏಪ್ರಿಲ್ 2022, 11:23 IST
Last Updated 15 ಏಪ್ರಿಲ್ 2022, 11:23 IST
ಕೆವಿಎಸ್‌ ಲಾಂಛನ
ಕೆವಿಎಸ್‌ ಲಾಂಛನ   

ನವದೆಹಲಿ: ದೇಶದಾದ್ಯಂತ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿ ಸಂಸದರಿಗಿದ್ದ ಕೋಟಾ ಸೇರಿದಂತೆ ಎಲ್ಲ ಬಗೆಯ ‘ವಿವೇಚನಾ ಕೋಟಾ’ಗಳನ್ನು ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್‌) ತಡೆಹಿಡಿದಿದೆ.

ಈ ಸಂಬಂಧ ಎಲ್ಲ ಕೇಂದ್ರೀಯ ವಿದ್ಯಾಲಯಗಳಿಗೆ ಪತ್ರ ಬರೆದಿರುವ ಕೆವಿಎಸ್‌, ‘ಕೇಂದ್ರ ಕಚೇರಿಯ ನಿರ್ದೇಶನದಂತೆ, ಮುಂದಿನ ಆದೇಶದವರೆಗೆ ವಿಶೇಷ ನಿಯಮಗಳಡಿ ಯಾರಿಗೂ ಪ್ರವೇಶ ನೀಡಬಾರದು’ ಎಂದು ಸೂಚಿಸಿದೆ.

2022–23ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಜೂನ್‌ವರೆಗೆ ಅವಕಾಶ ಇದೆ.

ADVERTISEMENT

ಬಿಜೆಪಿ ಸಂಸದ ಸುಶೀಲ್‌ ಮೋದಿ ಅವರು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಈ ನಿರ್ಧಾರವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. ‘ಇಂಥ ಕ್ರಮದಿಂದ ದೇಶದಾದ್ಯಂತ ಕೇಂದ್ರೀಯ ವಿದ್ಯಾಲಯಗಳಲ್ಲಿನ 30 ಸಾವಿರ ಸೀಟುಗಳು ಪ್ರವೇಶಕ್ಕೆ ಮುಕ್ತವಾಗಲಿವೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ವಿಶೇಷ ನಿಯಮಗಳ ಪ್ರಕಾರ ಲೋಕಸಭಾ ಸದಸ್ಯರಿಗೆ ‘ವಿವೇಚನಾ ಕೋಟಾ’ ಇದ್ದು, ಇದರಡಿ 10 ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ನೀಡುವಂತೆ ಅವರು ಶಿಫಾರಸು ಮಾಡಬಹುದಾಗಿದೆ. ಜಿಲ್ಲಾಧಿಕಾರಿಗೂ ಈ ‘ವಿವೇಚನಾ ಕೋಟಾ’ ಸೌಲಭ್ಯ ಇದ್ದು, ಅವರು 17 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಶಿಫಾರಸು ಮಾಡಬಹುದು.

2021–22ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಕೇಂದ್ರ ಶಿಕ್ಷಣ ಸಚಿವರಿಗಿದ್ದ ವಿವೇಚನಾ ಕೋಟಾವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರದ್ದು ಮಾಡಿತ್ತು.

ದೇಶದಲ್ಲಿ 1,200 ಕೇಂದ್ರೀಯ ವಿದ್ಯಾಲಯಗಳಿದ್ದು, 14.35 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇವುಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.