ADVERTISEMENT

ಮೇಕೆದಾಟು ಯೋಜನೆಗೆ ಒಪ್ಪಿಗೆ ಬೇಡ: ಪ್ರಧಾನಿಗೆ ಡಿಎಂಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 13:27 IST
Last Updated 22 ಸೆಪ್ಟೆಂಬರ್ 2020, 13:27 IST
ಮೇಕೆದಾಟು ಪ್ರದೇಶ
ಮೇಕೆದಾಟು ಪ್ರದೇಶ   

ಚೆನ್ನೈ:ಕಾವೇರಿ ನದಿಗೆ ಮೇಕೆದಾಟು ಬಳಿ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿ ಕರ್ನಾಟಕ ರೂಪಿಸಿರುವ ಯೋಜನೆಗೆ ಒಪ್ಪಿಗೆ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯದ ಪ್ರಮುಖ ವಿರೋಧ ಪಕ್ಷ ಡಿಎಂಕೆ ಮಂಗಳವಾರ ಒತ್ತಾಯಿಸಿದೆ.

ಈ ಜಲಾಶಯ ನಿರ್ಮಾಣ ತಮಿಳುನಾಡು ಹಾಗೂ ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದೂ ಪಕ್ಷದ ಮುಖಂಡರು ಹೇಳಿದ್ದಾರೆ.

ಪಕ್ಷದ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಟಿ.ಆರ್‌.ಬಾಲು, ದಯಾನಿಧಿ ಮಾರನ್‌ ಹಾಗೂ ಕನಿಮೋಳಿ ಅವರನ್ನು ಒಳಗೊಂಡ ನಿಯೋಗ ಪ್ರಧಾನಿ ಮೋದಿ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿತು. ಮೇಕೆದಾಟು ಯೋಜನೆ ವಿರೋಧಿಸಿಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಅವರು ಬರೆದ ಪತ್ರವನ್ನು ಈ ನಿಯೋಗ ಪ್ರಧಾನಿಗೆ ಸಲ್ಲಿಸಿತು.

ADVERTISEMENT

ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದ್ದ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರಧಾನಿ ಹಾಗೂ ಕೇಂದ್ರದ ಕೆಲವು ಸಚಿವರನ್ನು ಭೇಟಿ ಮಾಡಿದ್ದರು. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒಪ್ಪಿಗೆ ನೀಡುವಂತೆಯೂ ಕೋರಿದ್ದರು. ಇದರ ಬೆನ್ನಲ್ಲೇ, ಈ ಯೋಜನೆ ವಿರೋಧಿಸಿ ಡಿಎಂಕೆ ಪತ್ರ ಬರೆದಿದೆ.

ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಮುಖಂಡ ಟಿ.ಆರ್‌.ಬಾಲು, ‘ತಮಿಳುನಾಡು ಜನರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬುದಾಗಿ ಪ್ರಧಾನಿ ಆಶ್ವಾಸನೆ ನೀಡಿದ್ದಾರೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.