ADVERTISEMENT

ಪರಿಶಿಷ್ಟರ ವಿರುದ್ಧ ಹೇಳಿಕೆ: ರಾಜ್ಯಸಭೆ ಸದಸ್ಯ ಭಾರತಿ ಬಂಧನ

ಪಿಟಿಐ
Published 23 ಮೇ 2020, 19:47 IST
Last Updated 23 ಮೇ 2020, 19:47 IST
ರಾಜ್ಯಸಭಾ ಸದಸ್ಯ ಆರ್.ಎಸ್.ಭಾರತಿ
ರಾಜ್ಯಸಭಾ ಸದಸ್ಯ ಆರ್.ಎಸ್.ಭಾರತಿ   

ಚೆನ್ನೈ: ಪರಿಶಿಷ್ಟ ಜಾತಿ ಸಮುದಾಯವನ್ನು ನಿಂದಿಸಿ ಹೇಳಿಕೆಯನ್ನು ನೀಡಿದ್ದ ಆರೋಪದ ಮೇಲೆ ಡಿಎಂಕೆ ಪಕ್ಷದ ನಾಯಕ, ರಾಜ್ಯಸಭೆ ಸದಸ್ಯ ಆರ್.ಎಸ್.ಭಾರತಿ ಅವರನ್ನು ಶನಿವಾರ ಪೊಲೀಸರು ಬಂಧಿಸಿದರು. ಈ ಬೆಳವಣಿಗೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಮತ್ತು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರ ನಡುವೆ ಬಿಸಿ ಚರ್ಚೆಗೂ ಆಸ್ಪದವಾಗಿದೆ.

ರಾಜ್ಯಸಭೆ ಸದಸ್ಯರ ಬಂಧನ ರಾಜ್ಯ ಸರ್ಕಾರದ ಹುನ್ನಾರವಾಗಿದೆ. ಕೋವಿಡ್‌ ಪರಿಸ್ಥಿತಿ ಎದುರಿಸುವಲ್ಲಿ ಆಡಳಿತದ ವೈಫಲ್ಯ ಮತ್ತು ಭ್ರಷ್ಟಾಚಾರದಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಯತ್ನವಾಗಿದೆ ಎಂದು ಸ್ಟಾಲಿನ್‌ ಆರೋಪಿಸಿದ್ದಾರೆ. ಪ್ರತಿಯಾಗಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರು, ವಿರೋಧಪಕ್ಷದ ನಾಯಕರು ರಾಜಕೀಯ ಲಾಭಕ್ಕಾಗಿ ನಾಟಕ ಆಡುತ್ತಿದ್ದಾರೆ ಎಂದು ದೂರಿದ್ದಾರೆ.

ಡಿಎಂಕೆ ಸಂಘಟನಾ ಕಾರ್ಯದರ್ಶಿಯಾಗಿರುವ ಭಾರತಿ ಅವರನ್ನು ಇದಕ್ಕೂ ಮೊದಲು ಅವರ ನಿವಾಸದಲ್ಲಿ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಅವರಿಗೆ ಸ್ಥಳೀಯ ನ್ಯಾಯಾಲಯವು ಜೂನ್‌ 1ರವರೆಗೂ ಮಧ್ಯಂತರ ಜಾಮೀನು ಮಂಜೂರು ಮಾಡಿತು.

ADVERTISEMENT

ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕಾಗಿ ನನ್ನನ್ನು ಬಂಧಿಸಲಾಗಿದೆ ಎಂದು ಭಾರತಿ ಆರೋಪಿಸಿದರು. ಪರಿಶಿಷ್ಟ ಜಾತಿ ವಿರುದ್ಧದ ಹೇಳಿಕೆಗಾಗಿ ದೂರು ಆಧರಿಸಿ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅನುಸಾರ ಅವರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.