ADVERTISEMENT

ರಾಜ್ಯಪಾಲರ ಜತೆ ವಾಗ್ವಾದ: ಡಿಎಂಕೆ ಸದಸ್ಯರ ಸಭಾತ್ಯಾಗ

ಪಿಟಿಐ
Published 2 ಫೆಬ್ರುವರಿ 2021, 8:17 IST
Last Updated 2 ಫೆಬ್ರುವರಿ 2021, 8:17 IST
ತಮಿಳುನಾಡು ವಿಧಾನಸಭೆಯ ಅಧಿವೇಶನದಿಂದ ಹೊರ ನಡೆದ ಡಿಎಂಕೆ ಪಕ್ಷದ ಸದಸ್ಯರು –ಪಿಟಿಐ ಚಿತ್ರ
ತಮಿಳುನಾಡು ವಿಧಾನಸಭೆಯ ಅಧಿವೇಶನದಿಂದ ಹೊರ ನಡೆದ ಡಿಎಂಕೆ ಪಕ್ಷದ ಸದಸ್ಯರು –ಪಿಟಿಐ ಚಿತ್ರ   

ಚೆನ್ನೈ: ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವುದರ ಕುರಿತು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಮತ್ತು ಡಿಎಂಕೆ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದು ಡಿಎಂಕೆ ಪಕ್ಷದ ಸದಸ್ಯರು ಅಧಿವೇಶನವನ್ನು ಬಹಿಷ್ಕರಿಸಿ, ಸಭಾತ್ಯಾಗ ಮಾಡಿದರು.

ರಾಜ್ಯಪಾಲರು ಭಾಷಣ ಆರಂಭಿಸುವುದಕ್ಕೂ ಮುನ್ನವೇ ವಿರೋಧ ಪಕ್ಷದ ನಾಯಕರಾದ ಎಂ.ಕೆ.ಸ್ಟಾಲಿನ್‌ ಅವರು ರಾಜ್ಯಕ್ಕೆ ಸಂಬಂಧಿತ ಕೆಲ ಸಮಸ್ಯೆಗಳನ್ನು ಪ್ರಸ್ತಾಪಿಸಲು ಮುಂದಾದರು. ಈ ವೇಳೆ ಪುರೋಹಿತ್‌ ಅವರು ಕೇಂದ್ರ ಬಜೆಟ್‌ನಲ್ಲಿ ತಮಿಳುನಾಡಿಗೆ ₹1.03 ಲಕ್ಷ ಕೋಟಿ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಡಿಎಂಕೆಯ ಉಪನಾಯಕ ದೊರೈಮುರುಗನ್‌ ಮತ್ತು ಪಕ್ಷದ ಇತರ ಸದಸ್ಯರು,‘ ರಾಜ್ಯಪಾಲರು ತಮ್ಮ ಭಾಷಣವನ್ನು ಹೊರತುಪಡಿಸಿ, ಇತರೆ ವಿಷಯಗಳನ್ನು ಪ್ರಸ್ತಾಪಿಸಬಾರದು’ ಎಂದು ಹೇಳಿದರು.

ADVERTISEMENT

ಇದಕ್ಕೆ ಪ್ರತ್ಯುತ್ತರ ನೀಡಿದ ರಾಜ್ಯಪಾಲರು ,‘ಇದು ಸರಿಯಲ್ಲ, ಇದರಲ್ಲಿ ತಪ್ಪೇನಿದೆ?. ಇದು ಈಗಿನ ವಿಧಾನಸಭೆಯ ಕೊನೆಯ ಅಧಿವೇಶನವಾಗಿದೆ. ಹಾಗಾಗಿ ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ ಇದರ ಸಂಪೂರ್ಣ ಲಾಭವನ್ನು ಪಡೆಯಿರಿ’ ಎಂದು ರಾಜ್ಯಪಾಲರು ಹೇಳಿದರು.

‘ನೀವೆಲ್ಲರೂ ಹಿರಿಯ ನಾಯಕರು ಹಾಗೂ ವಾಕ್ ಚಾತುರ್ಯ ಪ್ರವೀಣರೂ. ನೀವು ದಯವಿಟ್ಟು ಸಹಕರಿಸಬೇಕು. ಅಧಿವೇಶನದ ಸಂಪೂರ್ಣ ಲಾಭವನ್ನು ಪಡೆಯಿರಿ. ಕೋಪಗೊಳ್ಳಬೇಡಿ. ನೀವು ಬೇಕಿದ್ದಲ್ಲಿ ಪ್ರತಿಭಟನೆ ದಾಖಲಿಸಿ. ಮತ್ತೆ ಅಧಿವೇಶನದಲ್ಲಿ ಭಾಗಿಯಾಗುವಂತೆ’ ಅವರು ಮನವಿ ಮಾಡಿದರು. ರಾಜ್ಯಪಾಲರು ಭಾಷಣ ಆರಂಭಿಸುತ್ತಿದ್ದಂತೆಯೇ ಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.