ADVERTISEMENT

ಮೋದಿ ಅವರೇ ತಮಿಳುನಾಡಿಗೆ ಸ್ವಾಯತ್ತತೆ ನೀಡಿ, ಇಲ್ಲವೇ..? ಡಿಎಂಕೆ ನಾಯಕ ಎ. ರಾಜಾ

ಪಿಟಿಐ
Published 4 ಜುಲೈ 2022, 12:56 IST
Last Updated 4 ಜುಲೈ 2022, 12:56 IST
ಎ. ರಾಜಾ
ಎ. ರಾಜಾ   

ಚೆನ್ನೈ: ‘ರಾಜ್ಯಕ್ಕೆ ಸ್ವಾಯತ್ತತೆ ನೀಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಲ್ಲಿ ಮೊರೆಯಿಟ್ಟಿರುವ ಡಿಎಂಕೆ ನಾಯಕ ಎ. ರಾಜಾ ಅವರು, ‘ಸ್ವತಂತ್ರ ದೇಶಕ್ಕಾಗಿ ಒತ್ತಾಯಿಸುವ ಸ್ಥಿತಿಗೆ ನಮ್ಮನ್ನು ತಳ್ಳಬೇಡಿ’ ಎಂದು ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಪಕ್ಷದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ದ್ರಾವಿಡ ಚಳವಳಿ ನೇತಾರರಾದ ಪೆರಿಯಾರ್‌ ಅವರು ಸ್ವತಂತ್ರ ತಮಿಳುನಾಡಿನ ಕುರಿತು ಪ್ರತಿಪಾದಿಸಿದ್ದರು. ಆದರೆ ಡಿಎಂಕೆ ಇದರಿಂದ ದೂರ ಸರಿದಿದೆ ಎಂದು ಅವರು ತಿಳಿಸಿದರು.

ಪಕ್ಷವು ಪೆರಿಯಾರ್ ಅವರನ್ನು ಒಪ್ಪಿಕೊಂಡರೂ, ಸಮಗ್ರತೆ ಮತ್ತು ಪ್ರಜಾಪ್ರಭುತ್ವವನ್ನು ಬೆಂಬಲಿಸಿದೆ. ಭಾರತದ ಒಳಿತನ್ನೇ ಬಯಸುತ್ತಿರುವ ಪಕ್ಷವೂ ಇದನ್ನೇ ಮುಂದುವರಿಸಿಕೊಂಡು ಹೋಗಲು ಇಚ್ಛಿಸುತ್ತದೆ ಎಂದೂ ಅವರು ಹೇಳಿದರು.

ADVERTISEMENT

‘ನಮ್ಮ ಮುಖ್ಯಮಂತ್ರಿ ಅವರು, ಅಣ್ಣನವರ (ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಸಂಸ್ಥಾಪಕ) ಹಾದಿಯಲ್ಲಿ ಸಾಗುತ್ತಿದ್ದಾರೆ. ನಮ್ಮನ್ನು ಪೆರಿಯಾರ್‌ ಹಾದಿಯಲ್ಲಿ ಸಾಗುವಂತೆ, ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸುವಂತೆ ಮಾಡಬೇಡಿ. ಬದಲಿಗೆ ರಾಜ್ಯಕ್ಕೆ ಸ್ವಾಯತ್ತತೆ ನೀಡಿ’ ಎಂದು ಆಗ್ರಹಿಸಿದ ರಾಜಾ ಅವರು, ‘ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.