ADVERTISEMENT

ಶಬರಿಮಲೆ ವರದಿಗೆ ಪತ್ರಕರ್ತೆಯರನ್ನು ಕಳುಹಿಸಬೇಡಿ: ಹಿಂದೂ ಸಂಘಟನೆಗಳಿಂದ ಪತ್ರ

ಮಾಧ್ಯಮಗಳಿಗೆ ‘ಶಬರಿಮಲ ಕರ್ಮ ಸಮಿತಿ’ ಪತ್ರ

ಏಜೆನ್ಸೀಸ್
Published 4 ನವೆಂಬರ್ 2018, 9:17 IST
Last Updated 4 ನವೆಂಬರ್ 2018, 9:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಒಂದು ದಿನದ ಪೂಜೆಗಾಗಿ ಸೋಮವಾರ ಕೇರಳದ ಶಬರಿಮಲೆ ದೇಗುಲದ ಬಾಗಿಲು ತೆರೆಯಲಿದ್ದು, ಈ ಸಂದರ್ಭದ ವರದಿಗಾರಿಕೆಗೆ ಪತ್ರಕರ್ತೆಯರನ್ನು ಕಳುಹಿಸಬೇಡಿ ಎಂದು ಹಿಂದೂ ಸಂಘಟನೆಯೊಂದು ಮಾಧ್ಯಮಗಳ ಸಂಪಾದಕರಿಗೆ ಪತ್ರ ಬರೆದಿದೆ.

‘ಕರ್ತವ್ಯದ ನೆಪದಲ್ಲಿ ಸ್ತ್ರೀಯರನ್ನು ವರದಿಗಾರಿಕೆಗೆ ಕಳುಹಿಸಿದರೆ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳಬಹುದು. ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಭಕ್ತರ ನಿಲುವನ್ನು ಒಪ್ಪಿಕೊಳ್ಳುವ ಅಥವಾ ವಿರೋಧಿಸುವ ಹಕ್ಕು ನಿಮಗಿದೆ ಎಂಬುದು ತಿಳಿದಿದೆ. ಪರಿಸ್ಥಿತಿಯನ್ನು ಉಲ್ಬಣಗೊಳಿಸುವಂತಹ ನಿರ್ಧಾರವನ್ನು ನೀವು ಕೈಗೊಳ್ಳುವುದಿಲ್ಲ ಎಂಬ ಆಶಾವಾದ ಹೊಂದಿದ್ದೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಐಕ್ಯವೇದಿ ಒಳಗೊಂಡಿರುವ ಬಲಪ‍ಂಥೀಯ ಸಂಘಟನೆ ಶಬರಿಮಲ ಕರ್ಮ ಸಮಿತಿ ಈ ಪತ್ರ ಬರೆದಿದೆ.

ADVERTISEMENT

‘ಎಲ್ಲ ವಯಸ್ಸಿನ ಮಹಿಳೆಯರೂ ಶಬರಿಮಲೆ ಪ್ರವೇಶಿಸಬಹುದು’ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರಒಟ್ಟು ಐದು ದಿನ ದೇಗುಲದ ಬಾಗಿಲು ತೆರೆದಿತ್ತು. ಈ ಸಂದರ್ಭ ಸುಮಾರು 12 ಯುವತಿಯರು ಪೊಲೀಸ್ ರಕ್ಷಣೆಯಲ್ಲಿ ದೇಗುಲ ಪ್ರವೇಶಿಸಲು ವಿಫಲಯತ್ನ ನಡೆಸಿದ್ದರು. ಯಾವೊಂದು ದಿನವೂ ಮಹಿಳಾ ಭಕ್ತರು ದೇಗುಲದೊಳಕ್ಕೆ‍ಪ್ರವೇಶಿಸದಂತೆ ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದರು. ಆ ಸಂದರ್ಭ ಶಬರಿಮಲೆ ಸುತ್ತ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಮಾಧ್ಯಮ ಸಿಬ್ಬಂದಿ, ವಾಹನಗಳ ಮೇಲೂ ಹಲ್ಲೆ ನಡೆದಿತ್ತು. ಪೊಲೀಸ್ ಮೂಲಗಳ ಪ್ರಕಾರ,ಈವರೆಗೆ ಒಟ್ಟು 543 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3701 ಮಂದಿಯನ್ನು ಬಂಧಿಸಲಾಗಿದೆ

ಕೇರಳದಲ್ಲಿ ಕಟ್ಟೆಚ್ಚರ

ಅಯ್ಯಪ್ಪ ದೇಗುಲ ಸಮೀಪದ ಪಂಪಾ ಮತ್ತು ಇತರ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಮಂಗಳವಾರದವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಸನ್ನಿಧಾನಂ, ಪಂಪಾ, ನಿಲಕ್ಕಲ್, ಇಳುವಂಗಲ್ ಸುತ್ತಮುತ್ತ ನಿಷೇಧಾಜ್ಞೆ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.