ಪ್ರಾತಿನಿಧಿಕ ಚಿತ್ರ
ಕೊಲ್ಲಂ: ವರದಕ್ಷಿಣಿಗೆ ಪೀಡಿಸಿ ಮಹಿಳೆಯೊಬ್ಬರಿಗೆ ಊಟ ನೀಡದೆ ಸಾವಿಗೆ ಕಾರಣವಾದ ಪತಿ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ ನೀಡಿ ಇಲ್ಲಿನ ನ್ಯಾಯಾಲಯ ಸೋಮವಾರ ಆದೇಶಿಸಿದೆ.
2019ರಲ್ಲಿ ನಡೆದ ಪ್ರಕರಣದಲ್ಲಿ ಚಂದೂಲಾಲ್ (36) ಮತ್ತು ಅವರ ತಾಯಿ ಗೀತಾ (62) ಶಿಕ್ಷೆಗೆ ಗುರಿಯಾದವರು.
‘ತುಷಾರಾ (26) ಅವರಿಗೆ ಊಟ ನೀಡದ ಕಾರಣ ಅವರು ಮೃತಪಟ್ಟಿದ್ದರು. ಇದು ಕೇರಳದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. 2013ರಲ್ಲಿ ಮದುವೆಯಾಗಿದ್ದ ತುಷಾರಾ ಮತ್ತು ಚಂದೂಲಾಲ್ಗೆ ಇಬ್ಬರು ಮಕ್ಕಳು ಇದ್ದಾರೆ’ ಎಂದು ವಿಶೇಷ ಪ್ರಾಸಿಕ್ಯೂಟರ್ ಕೆ.ಬಿ.ಮಹೇಂದ್ರ ತಿಳಿಸಿದ್ದಾರೆ.
‘ಹಲವು ದಿನಗಳ ಕಾಲ ಊಟ ಕಾರಣ ತುಷಾರಾ ತೀವ್ರವಾಗಿ ಕೃಷರಾಗಿದ್ದರು. ಆಗ ಅವರ ದೇಹದ ತೂಕ 21 ಕೆ.ಜಿ.ಗೆ ಕುಸಿದಿತ್ತು. ತೀವ್ರವಾಗಿ ನಿತ್ರಾಣರಾಗಿದ್ದ ಅವರು ಸರ್ಕಾರಿ ಆಸ್ಪತ್ರೆಯಲ್ಲಿ 2019ರ ಮಾರ್ಚ್ 21ರಂದು ಅವರು ಕೊನೆಯುಸಿರೆಳೆದರು. ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿತ್ತು. ವರದಕ್ಷಿಣೆ ಪ್ರಕರಣ ಅಲ್ಲಲ್ಲಿ ದಾಖಲಾಗುತ್ತಿರುವುದು ಸುದ್ದಿಯಾಗುತ್ತಿದ್ದರೂ, ಇದು ತೀರಾ ವಿಲಕ್ಷಣದ ಪ್ರಕರಣವಾಗಿತ್ತು. ಎರಡು ಮಕ್ಕಳ ತಾಯಿಯನ್ನು ಊಟ ನೀಡದೆ ಸಾಯಿಸಿದ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು’ ಎಂದು ವಿವರಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ಚಂದೂಲಾಲ್ ಮತ್ತು ಗೀತಾ ಅವರನ್ನು ಬಂಧಿಸಿತ್ತು. ಇವರ ವಿರುದ್ಧದ ದೋಷಾರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.