ನಾಗ್ಪುರ: ಸಾಮಾಜಿಕ– ಆರ್ಥಿಕ ಸಮಾನತೆ ಕುರಿತಾದ ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ–ಸಿದ್ಧಾಂತಗಳು ಭವಿಷ್ಯದ ಪೀಳಿಗೆಗೆ ಮಾರ್ಗದರ್ಶನ ಒದಗಿಸಲಿವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್ ಗವಾಯಿ ಶನಿವಾರ ಹೇಳಿದ್ದಾರೆ.
ಇಲ್ಲಿನ ಅಂಬೇಡ್ಕರ್ ಕಾಲೇಜಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ಗವಾಯಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಅಂಬೇಡ್ಕರ್ ಅವರ ಸಾಮಾಜಿಕ–ಆರ್ಥಿಕ ಸಮಾನತೆ ತತ್ವಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.
ಅಲ್ಲದೇ, ‘ಮಹಿಳಾ ಸಬಲೀಕರಣವು ಸಮಾಜವೊಂದರ ಅಭಿವೃದ್ಧಿಯನ್ನು ಅಳೆಯುವ ಮಾನದಂಡವಾಗಿದ್ದು, ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿನಿಯರು ಆ ಮಾನದಂಡವನ್ನು ಪೂರೈಸಿರುವುದನ್ನು ನೋಡಲು ಸಂತಸವಾಗುತ್ತಿದೆ. ಮಹಿಳೆಯರ ಅಭಿವೃದ್ಧಿಯು ಅಂಬೇಡ್ಕರ್ ಅವರಿಗೆ ನೀಡಬಹುದಾದ ಗೌರವವಾಗಿದೆ’ ಎಂದೂ ಹೇಳಿದ್ದಾರೆ.
ಯಶಸ್ವಿ ವ್ಯಕ್ತಿಗೂ, ಶ್ರೇಷ್ಠ ವ್ಯಕ್ತಿಗೂ ವ್ಯತ್ಯಾಸವಿದೆ. ಶ್ರೇಷ್ಠ ವ್ಯಕ್ತಿಯಾದವನು ತನ್ನ ಯಶಸ್ಸಿನೊಂದಿಗೆ ಸಮಾಜದ ಉನ್ನತಿಗೂ ಸೇವೆ ಸಲ್ಲಿಸುತ್ತಾನೆ. ಅಂಥ ವ್ಯಕ್ತಿಯಾಗುವ ದೃಢ ನಿಶ್ಚಯವಿದ್ದರೆ ಅಂಬೇಡ್ಕರ್ ಅವರ ತತ್ವಗಳು ನಮ್ಮನ್ನು ಮುನ್ನಡೆಸುತ್ತವೆ ಎಂದೂ ಗವಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.