ಮುಂಬೈ: ಡ್ರಗ್ಸ್ ಪ್ರಕರಣದ ಸ್ವತಂತ್ರ ಸಾಕ್ಷಿದಾರನ ಅಫಿಡವಿಟ್ ಅನ್ನು ನ್ಯಾಯಾಲಯವು ಸ್ವೀಕರಿಸದಂತೆ ವಿಶೇಷ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಹೇಳಿದೆ.
ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಆರೋಪಿಯಾಗಿರುವ ಪ್ರಕರಣದಲ್ಲಿ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಹಣ ಸುಲಿಗೆ ಯತ್ನ ನಡೆಸಿದ್ದಾರೆ ಎಂದು ಸಾಕ್ಷಿದಾರ ಪ್ರಭಾಕರ ಸೈಲ್ ಆರೋಪಿಸಿದ್ದರು.
ತಮ್ಮ ವಿರುದ್ಧದ ಸುಲಿಗೆ ಆರೋಪ ಮಾಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ ಎಂದು ಎನ್ಸಿಬಿ ಮತ್ತು ವಲಯ ನಿರ್ದೆಶಕ ಸಮೀರ್ ವಾಖೆಂಡೆ, ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನಿಖೆಗೆ ತೊಡಕಾಗದಂತೆ ರಕ್ಷಣೆಗಾಗಿ ವಿಶೇಷ ಆದೇಶ ಮಾಡುವಂತೆ ಕೋರಿದ್ದರು. ಆದರೆ, ವಾಂಖೆಡೆ ಮತ್ತು ಎನ್ಸಿಬಿ ಅಫಿಡವಿಟ್ ಅನ್ನು ತಳ್ಳಿ ಹಾಕಿರುವ ನ್ಯಾಯಾಲಯವು, ಈ ಸಂದರ್ಭ ಆ ರೀತಿಯ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ. ಸೂಕ್ತ ಸಂದರ್ಭದಲ್ಲಿ ವಿಶೇಷ ಆದೇಶ ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ನ್ಯಾಯಾಧೀಶ ವಿ.ವಿ. ಪಾಟೀಲ್ ಹೇಳಿದ್ದಾರೆ.
ಇದೇವೇಳೆ, ಆರ್ಯನ್ ಖಾನ್ (23) ಮತ್ತು ಮುನ್ಮುನ್ ಧಮೇಚಾ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ನಾಳೆ ಬಾಂಬೆ ಹೈಕೋರ್ಟ್ ಮುಂದೆ ಬರಲಿದ್ದು, ಈ ಸಂದರ್ಭ ಯಾವುದೇ ಆದೇಶ ನೀಡಲು ಬರುವುದಿಲ್ಲ ಎಂದಿರುವ ನ್ಯಾಯಾಲಯ, ಸಮೀರ್ ವಾಂಖೆಡೆ ಅರ್ಜಿಯ ವಿಚಾರಣೆಯನ್ನು ಅಂತ್ಯಗೊಳಿಸಿದೆ.
ಆರ್ಯನ್ ಖಾನ್ ಬಿಡುಗಡೆಗೆ ಎನ್ಸಿಬಿಯ ಅಧಿಕಾರಿಯೊಬ್ಬರು ಮತ್ತು ತಲೆಮರೆಸಿಕೊಂಡಿರುವ ಕೆ.ಪಿ.ಗೋಸಾವಿ ಸಹಿತ ಇತರ ವ್ಯಕ್ತಿಗಳು ₹ 25 ಕೋಟಿ ಲಂಚ ಕೇಳಿದ್ದರು ಎಂದು ಸಾಕ್ಷಿದಾರ ಪ್ರಭಾಕರ ಸೈಲ್ ಆರೋಪಿಸಿದ್ದರು.
ಆದರೆ, ಆರೋಪ ತಳ್ಳಿ ಹಾಕಿದ್ದ ಎನ್ಸಿಬಿ ಮತ್ತು ಸಮೀರ್ ವಾಂಖೆಡೆ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅಫಿಡವಿಟ್ನಲ್ಲಿ, ತನ್ನ ಮತ್ತು ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ‘ವೈಯಕ್ತಿಕ ಸೇಡು’ ತೀರಿಸಿಕೊಳ್ಳಲಾಗುತ್ತಿದೆ. ನಮ್ಮ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು, ಕ್ಷುಲ್ಲಕ ಮತ್ತು ವಿಷಾದಕರವಾದುದ್ದಾಗಿದೆ’ಎಂದು ಸಮೀರ್ ವಾಂಖೆಡೆ ಹೇಳಿದ್ದರು.
ನನ್ನನ್ನು ಬಂಧಿಸುವ ಮತ್ತು ಸೇವೆಯಿಂದ ವಜಾಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ವಾಂಖೆಡೆ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.