ADVERTISEMENT

ಡ್ರಗ್ಸ್ ಪ್ರಕರಣ: ದೆಹಲಿಯ ಎನ್‌ಸಿಬಿ ಪ್ರಧಾನ ಕಚೇರಿಗೆ ಸಮೀರ್ ವಾಂಖೆಡೆ ಭೇಟಿ

ಪಿಟಿಐ
Published 26 ಅಕ್ಟೋಬರ್ 2021, 10:20 IST
Last Updated 26 ಅಕ್ಟೋಬರ್ 2021, 10:20 IST
ಎನ್‌ಸಿಬಿ ಮುಂಬೈ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಂಗಳವಾರ ದೆಹಲಿಯ ಎನ್‌ಸಿಬಿ ಪ್ರಧಾನ ಕಚೇರಿಗೆ ಭೇಟಿ ನೀಡುವ ವೇಳೆ, ಕಚೇರಿಯ ಹೊರಗಡೆ ಕೆಲವು ನಾಗರಿಕರು ಅವರನ್ನು ಬೆಂಬಲಿಸುವ ಘೋಷಣೆಯುಳ್ಳ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಿಡಿದು ನಿಂತಿದ್ದರು.
ಎನ್‌ಸಿಬಿ ಮುಂಬೈ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಅವರು ಮಂಗಳವಾರ ದೆಹಲಿಯ ಎನ್‌ಸಿಬಿ ಪ್ರಧಾನ ಕಚೇರಿಗೆ ಭೇಟಿ ನೀಡುವ ವೇಳೆ, ಕಚೇರಿಯ ಹೊರಗಡೆ ಕೆಲವು ನಾಗರಿಕರು ಅವರನ್ನು ಬೆಂಬಲಿಸುವ ಘೋಷಣೆಯುಳ್ಳ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಹಿಡಿದು ನಿಂತಿದ್ದರು.   

ನವದೆಹಲಿ: ಮುಂಬೈ ಕ್ರೂಸ್ ಡ್ರಗ್ಸ್‌ ಪಾರ್ಟಿ ಪ್ರಕರಣದ ತನಿಖೆ ನೇತೃತ್ವ ವಹಿಸಿರುವ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂಬೈ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ ಇಲ್ಲಿನ ಎನ್‌ಸಿಬಿ ಪ್ರಧಾನ ಕಚೇರಿಗೆ ಮಂಗಳವಾರ ಭೇಟಿ ನೀಡಿದರು.

ಸೋಮವಾರ ರಾತ್ರಿ ದೆಹಲಿಗೆ ಬಂದಿಳಿದಿದ್ದ ವಾಂಖೆಡೆ ಅವರು, ಮಂಗಳವಾರ ಆರ್‌.ಕೆ. ಪುರಂ ಪ್ರದೇಶದಲ್ಲಿರುವ ಎನ್‌ಸಿಬಿ ಪ್ರಧಾನ ಕಚೇರಿಗೆ ಬಂದರು. ಕಚೇರಿಯ ಹಿಂಬದಿಯ ದ್ವಾರದ ಮೂಲಕ ಪ್ರವೇಶಿಸಿದ ವಾಂಖೆಡೆ, ಕಚೇರಿಯಲ್ಲಿನ ಹಿರಿಯ ಅಧಿಕಾರಿಗಳನ್ನು ಭೇಟಿಯಾಗುವ ನಿರೀಕ್ಷೆಯಿದೆ.

‘ಡ್ರಗ್ಸ್‌ ಪ್ರಕರಣದ ಆರೋಪಿ ಆರ್ಯನ್ ಖಾನ್ ಬಿಡುಗಡೆಗೆ ವಾಂಖೆಡೆ ಸೇರಿದಂತೆ ಎನ್‌ಸಿಬಿಯ ಕೆಲವು ಅಧಿಕಾರಿಗಳು ₹ 25 ಕೋಟಿ ಕೇಳಿದ್ದರು ಎಂದು ಇದೇ ಪ್ರಕರಣದ ಸಾಕ್ಷಿದಾರರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಎನ್‌ಸಿಬಿ ವಿಚಕ್ಷಣ ದಳ ತನಿಖೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ವಾಂಖೆಡೆ ಅವರು ದೆಹಲಿಯ ಎನ್‌ಸಿಬಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ.

ADVERTISEMENT

ವಾಂಖೆಡೆ ಅವರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,‘ನನಗೆ ಯಾವ ಸಂಸ್ಥೆಯೂ ಸಮನ್ಸ್‌ ಕಳುಹಿಸಿಲ್ಲ. ನನಗೆ ಪ್ರಧಾನ ಕಚೇರಿಯಲ್ಲಿ ಕೆಲಸವಿದ್ದ ಕಾರಣ ಇಲ್ಲಿಗೆ ಬಂದಿದ್ದೇನೆ. ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.