ADVERTISEMENT

ಅ 2ರವರೆಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಚಾರ ರದ್ದು

ಪಿಟಿಐ
Published 18 ಸೆಪ್ಟೆಂಬರ್ 2020, 11:49 IST
Last Updated 18 ಸೆಪ್ಟೆಂಬರ್ 2020, 11:49 IST
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ –ಸಂಗ್ರಹ ಚಿತ್ರ 
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ –ಸಂಗ್ರಹ ಚಿತ್ರ    

ನವದೆಹಲಿ: ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು (ಡಿಸಿಎಎ) ಅಕ್ಟೋಬರ್‌ 2ರವರೆಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಸಂಚಾರವನ್ನು ರದ್ದು ಮಾಡಿದೆ.

‘ಕೋವಿಡ್‌–19 ಪಾಸಿಟಿವ್‌ ಪ್ರಮಾಣ ಪತ್ರ ಹೊಂದಿದ್ದ ಪ್ರಯಾಣಿಕರನ್ನು ಕರೆತಂದಿದ್ದಕ್ಕಾಗಿ ಡಿಸಿಎಎ ಈ ಕ್ರಮ ಕೈಗೊಂಡಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ (ಯುಎಇ) ನಿಯಮಗಳ ಪ್ರಕಾರ ಭಾರತದಿಂದ ದುಬೈಗೆ ಸಂಚರಿಸುವ ಪ್ರಯಾಣಿಕರು, ಪ್ರಯಾಣಕ್ಕೆ 96 ಗಂಟೆಗಳು ಮುಂಚಿತವಾಗಿಯೇ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಪಟ್ಟು ಕೋವಿಡ್‌ ನೆಗೆಟಿವ್‌ ಮೂಲ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ADVERTISEMENT

‘ಸೆಪ್ಟೆಂಬರ್‌ 2ರಂದು ಕೋವಿಡ್‌ ಪಾಸಿಟಿವ್‌ ಪ್ರಮಾಣ ಪತ್ರ ಪಡೆದಿದ್ದ ವ್ಯಕ್ತಿಯೊಬ್ಬ ಸೆಪ್ಟೆಂಬರ್‌ 4ರಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಜೈಪುರ–ದುಬೈ ವಿಮಾನದಲ್ಲಿ ಪ್ರಯಾಣಿಸಿದ್ದ. ಅದಕ್ಕೂ ಮುನ್ನ ಅದೇ ರೀತಿಯ ಇನ್ನೊಂದು ಘಟನೆಯೂ ನಡೆದಿತ್ತು. ಈ ಕಾರಣದಿಂದಾಗಿಯೇ ಡಿಸಿಎಎ, ಸೆಪ್ಟೆಂಬರ್‌ 18ರಿಂದ ಅಕ್ಟೋಬರ್‌ 2ರವರೆಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಸಂಚಾರವನ್ನು ರದ್ದು ಮಾಡಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ವಿಮಾನ ಸಂಚಾರ ರದ್ದು ಮಾಡಿರುವ ಸಂಬಂಧ ಡಿಸಿಎಎ ನೀಡಿರುವ ನೋಟಿಸ್‌ ಸೆಪ್ಟೆಂಬರ್‌ 17ರಂದು ನಮ್ಮ ಕೈಸೇರಿದೆ’ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಪ್ರಕಟಣೆ ತಿಳಿಸಿದೆ.

‘ಏರ್‌ ಇಂಡಿಯಾ ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವಿಸಸ್‌ ಲಿಮಿಟೆಡ್‌ನಿಂದ‌ (ಎಐಎಟಿಎಸ್‌ಎಲ್‌) ಲೋಪವಾಗಿದೆ. ಎಐಎಟಿಎಸ್‌ಎಲ್ ಸಿಬ್ಬಂದಿಯ ಅಜಾಗರೂಕತೆಯಿಂದಾಗಿಕೋವಿಡ್‌–19 ಪ್ರಮಾಣ ಪತ್ರ ಹೊಂದಿದ್ದ ಇಬ್ಬರು ವ್ಯಕ್ತಿಗಳು ಆಗಸ್ಟ್‌ 28ಮತ್ತು ಸೆಪ್ಟೆಂಬರ್‌ 4ರಂದು ಕ್ರಮವಾಗಿ ನವದೆಹಲಿ ಹಾಗೂ ಜೈಪುರದಿಂದ ದುಬೈಗೆ ಪ್ರಯಾಣ ಮಾಡಿದ್ದಾರೆ. ಸಿಬ್ಬಂದಿ ವಿರುದ್ಧಎಐಎಟಿಎಸ್‌ಎಲ್ ಕಠಿಣ ಕ್ರಮ ಕೈಗೊಂಡಿದೆ’ ಎಂದು ಪ್ರಕಟಣೆ ವಿವರಿಸಿದೆ.

‘ಕೋವಿಡ್‌ ರೋಗಿಗಳ ಅಕ್ಕಪಕ್ಕದ ಆಸನಗಳಲ್ಲಿ ಕುಳಿತು ಪ್ರಯಾಣಿಸಿದವರನ್ನು ಕೊರೊನಾ‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸ್ವಯಂ ಪ್ರತ್ಯೇಕವಾಸದಲ್ಲಿರಲು ಸೂಚಿಸಿರುವುದಾಗಿ ದುಬೈ ಆರೋಗ್ಯ ಇಲಾಖೆಯ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ’ ಎಂದೂ ಪ್ರಕಟಣೆ ಹೇಳಿದೆ.

‘ಇನ್ನು ಮುಂದೆ ಮೂರು ಹಂತದಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಪ್ರಯಾಣಿಕರಿಗೆ ವಿಮಾನದೊಳಗೆ ಪ್ರವೇಶ ನೀಡಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಐಎಟಿಎಸ್‌ಎಲ್‌ಗೆ ಸೂಚಿಸಲಾಗಿದೆ. ಎಕ್ಸ್‌ಪ್ರೆಸ್‌ ವಿಮಾನ ರದ್ದುಗೊಂಡಿದ್ದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾರ್ಜಾಗೆ ಹೆಚ್ಚುವರಿ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ’ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.