ಮುಂಬೈ: ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಸೇವೆ ಸೇರಿದಂತೆ ಸೂಕ್ತ ಸೌಲಭ್ಯಗಳು ದೊರೆಯದೆ ರೋಗಿಗಳು ತೊಂದರೆಗೊಳಗಾದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದ್ದರೂ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಇದೀಗ ಇಂತಹ ಮತ್ತೊಂದು ಪ್ರಕರಣ ಮಹಾರಾಷ್ಟ್ರದ ನಂದದ್ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಸ್ಟ್ರೆಚರ್ ಸೌಲಭ್ಯ ದೊರೆಯದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಬೆಡ್ಶೀಟ್ನಲ್ಲಿ ಕೂರಿಸಿ ಎಳೆದುಕೊಂಡು ಹೋಗಿರುವ ಅಮಾನವೀಯ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೇ. 05ರಂದು ಡೆಹ್ರಾಡೂನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಇಂತದೇ ಪ್ರಕರಣ ವರದಿಯಾಗಿತ್ತು. ಆಸ್ಪತ್ರೆ ಸಿಬ್ಬಂದಿಸ್ಟ್ರೆಚರ್ ನೀಡಲು ನಿರಾಕರಿಸಿದ ಕಾರಣ ಅನಾರೋಗ್ಯದಿಂದ ನರಳುತ್ತಿದ್ದ ಸಹೋದರನನ್ನು ವ್ಯಕ್ತಿಯೊಬ್ಬರು ಬೆನ್ನ ಮೇಲೆ ಹೊತ್ತೊಯ್ದಿದ್ದರು.
ಕರ್ನಾಟಕದಲ್ಲಿಯೂ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ.
ಶಿವಮೊಗ್ಗದಮೆಗ್ಗಾನ್ ಆಸ್ಪತ್ರೆಯಲ್ಲಿಕಳದೆ ವರ್ಷ ಜೂನ್ ತಿಂಗಳಲ್ಲಿ ಘಟನೆ ನಡೆದಿತ್ತು. ಎಕ್ಸ್ರೇ ಮಾಡಿಸುವ ಕೊಠಡಿಗೆ ಪತಿಯನ್ನು ಕರೆದೊಯ್ಯಲು ಆಸ್ಪತ್ರೆಯ ಸಿಬ್ಬಂದಿ ಸ್ಟ್ರೆಚರ್ ನೀಡದ ಕಾರಣ ವೃದ್ದೆಯೊಬ್ಬರು ಪತಿಯ ಕಾಲು ಹಿಡಿದುಕೊಂಡು ಎಳೆದುಕೊಂಡು ಹೋಗಿದ್ದರು.
ಸಿಸಿಟಿವಿಯಲ್ಲಿ ಸೆರೆಯಾಗಿದ್ದಈ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದಕಾರಣ ತನ್ನ ಪೋಷಕರಿಬ್ಬರೂ ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಯುವಕನೊಬ್ಬ, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರತಿಭಟಿಸಿ ತಾಯಿ ಶವವನ್ನು ಹೆಗಲ ಮೇಲೆಯೇ ಹೊತ್ತು ಹೊರನಡೆದಿದ್ದರು. ಈ ಘಟನೆ2017ರ ಅಕ್ಟೋಬರ್ನಲ್ಲಿ ಬೆಳಕಿಗೆ ಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.