ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್ಎಸ್) ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಗಗನಯಾನಿ ಶುಭಾಂಶು ಶುಕ್ಲಾ ಅವರು, ಅಂತರಿಕ್ಷದಿಂದ ಭೂಮಿ ಕಾಣಿಸುವ ಬಗೆ ಕುರಿತು ನೀಡಿದ ಹೇಳಿಕೆಯು ಈಗ ಎನ್ಸಿಇಆರ್ಟಿಯ ಹೊಸ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿದೆ.
ಐಎಸ್ಎಸ್ ತಲುಪಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಭಾಷಣೆ ನಡೆಸಿದ್ದರು. ಈ ವೇಳೆ ಅವರು, ಭೂಮಿ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.
‘ಭೂಮಿ ಒಂದು ಪರಿಪೂರ್ಣ ಗೋಳ. ಅಂತರಿಕ್ಷದಿಂದ ನೋಡಿದಾಗ ಭೂಮಿಯಲ್ಲಿರುವ ಗಡಿಗಳು ಗೋಚರಿಸುವುದಿಲ್ಲ. ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದ ತಕ್ಷಣ ನನ್ನ ಮನಸಿನಲ್ಲಿ ಮೂಡಿದ ಭಾವನೆ ಇದು’ ಎಂದು ಶುಭಾಂಶು ಶುಕ್ಲಾ ಹೇಳಿದ್ದರು.
‘ಯಾವ ಗಡಿಗಳೂ ಇಲ್ಲ, ರಾಜ್ಯಗಳು ಹಾಗೂ ದೇಶಗಳೂ ಇಲ್ಲ. ನಾವೆಲ್ಲ ಮಾನವಕುಲದ ಭಾಗವೇ ಆಗಿದ್ದೇವೆ. ಭೂಮಿಯು ನಮ್ಮ ಏಕೈಕ ಮನೆಯಾಗಿದ್ದು, ನಾವೆಲ್ಲ ಇಲ್ಲಿ ಜೀವಿಸುತ್ತಿದ್ಧೇವೆ’ ಎಂದೂ ಶುಕ್ಲಾ ಹೇಳಿದ್ದರು.
ಎನ್ಸಿಇಆರ್ಟಿ ಪ್ರಕಟಿಸಿರುವ 5ನೇ ತರಗತಿಯ ಪರಿಸರ ಅಧ್ಯಯನ (ಅವರ ವಂಡ್ರಸ್ ವರ್ಲ್ಡ್) ಪಠ್ಯಪುಸ್ತಕದಲ್ಲಿನ ‘ಅರ್ಥ್, ಅವರ್ ಶೇರ್ಡ್ ಹೋಮ್’ ಎಂಬ ಅಧ್ಯಾಯದಲ್ಲಿ ಶುಕ್ಲಾ ಅವರ ಈ ಅಭಿಪ್ರಾಯವನ್ನು ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.