ADVERTISEMENT

ದುರ್ಗಾ ಪೂಜಾ ಸಮಿತಿಗಳಿಗೆ ಅನುದಾನ: ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಬೆಂಬಲ

ಪಿಟಿಐ
Published 21 ಅಕ್ಟೋಬರ್ 2020, 6:17 IST
Last Updated 21 ಅಕ್ಟೋಬರ್ 2020, 6:17 IST
ಅಭಿಜಿತ್‌ ಬ್ಯಾನರ್ಜಿ
ಅಭಿಜಿತ್‌ ಬ್ಯಾನರ್ಜಿ   

ಕೋಲ್ಕತ್ತ: ನವರಾತ್ರಿ ಉತ್ಸವದ ವೇಳೆ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ದುರ್ಗಾ ಪೂಜಾ ಸಮಿತಿಗಳಿಗೆ ತಲಾ ₹50,000 ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ಇದಕ್ಕೆ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ಬೆಂಬಲ ಸೂಚಿಸಿದ್ದಾರೆ.

ಸೆ.24 ರಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿನ 36,946 ದುರ್ಗಾಪೂಜಾ ಸಮಿತಿಗಳಿಗೆ ತಲಾ ₹50,000 ಅನುದಾನ ನೀಡುವುದಾಗಿ ಘೋಷಿಸಿದರು. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಹಲವರು ಹೈಕೋರ್ಟ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ನಿರ್ಧಾರವನ್ನು ಪಶ್ನಿಸಿದ್ದಾರೆ. ಆದರೆ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

‘ಕೋವಿಡ್‌ ಸುರಕ್ಷತಾ ಕ್ರಮಗಳಿಗಾಗಿ ದುರ್ಗಾ ಪೂಜಾ ಸಮಿತಿಗಳು ಹೆಚ್ಚುವರಿ ವೆಚ್ಚವನ್ನು ಮಾಡುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೆಗೆದುಕೊಂಡ ನಿರ್ಧಾರ ಕೆಟ್ಟದಲ್ಲ’ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ಕೋವಿಡ್‌ ಸುರಕ್ಷತಾ ಸಾಧನಗಳ ಖರೀದಿ, ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಸಂಬಂಧ ವೃದ್ದಿಯಂತಹ ಜಾತ್ಯತೀತ ಉದ್ದೇಶಗಳಿಗಾಗಿ ಅನುದಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದೆ. ಆದರೆ ನ್ಯಾಯಾಲಯವು ಕೋವಿಡ್‌ ಪ್ರಸರಣವನ್ನು ತಡೆಯಲು ಎಲ್ಲಾ ದುರ್ಗಾ ಪೂಜಾ ಪೆಂಡಾಲ್‌ಗಳನ್ನು ‘ನೋ ಎಂಟ್ರಿ ಜೋನ್‌’ ಎಂದು ಘೋಷಿಸುವಂತೆ ಆದೇಶಿಸಿದೆ.

‘ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೆಂಡಾಲ್‌ಗೆ ಆಗಮಿಸುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಜನರು ತಮ್ಮ ಸುರಕ್ಷತೆಗೆ ತಾವೇ ಜವಾಬ್ದಾರರು’ ಎಂದು ಅಭಿಜಿತ್‌ ಅವರು ಹೇಳಿದರು.

‘ಕೋವಿಡ್‌ನಿಂದಾಗಿ ಭಾರತದ ಆರ್ಥಿಕತೆಯಲ್ಲಿ ಉಂಟಾಗಿರುವ ಮಂದಗತಿಯು ಒಂದು ವರ್ಷದಲ್ಲಿ ಸಾಮಾನ್ಯ ಸ್ಥಿತಿಗೆ ಮರಳಬಹುದು. ಆರ್ಥಿಕತೆ ಮೇಲೆ ಸೋಂಕು ಕೆಟ್ಟ ಪರಿಣಾಮ ಬೀರಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.